ಡಾ. ಸರಸ್ವತಿ ಎಸ್. ರಾವ್ ಅವರಿಗೆ ನುಡಿನಮನ

ಡಾ. ಸರಸ್ವತಿ ಎಸ್. ರಾವ್ ಅವರಿಗೆ ನುಡಿನಮನ


ಮಂಗಳೂರು: ವಯಸ್ಸು ಐವತ್ತರ ನಂತರ ತಾವು ಕಲಿತ ಒಂದು ವಿಷಯದ ಬಗ್ಗೆ ಪಿ.ಹೆಚ್.ಡಿ. ಮಾಡುವಂಥ ಸಾಹಸಕ್ಕೆ ಕೈಹಾಕುವ ಮಹಿಳೆಯರು ವಿರಳಾತಿ ವಿರಳ. ಆದರೆ ಡಾ. ಸರಸ್ವತಿ ಎಸ್. ರಾವ್ ಅಂಥ ವಿರಳರಲ್ಲಿ ಒಬ್ಬರು. ಅವರು ಸಂಶೋದನೆಗೆ ನನ್ನ ಬಳಿ ಬಂದು ನೋಂದಾಯಿಸಿಕೊಂಡಾಗ ನಾನು ಬೆಚ್ಚಿ ಬಿದ್ದಿದ್ದೆ. ಆದರೆ ಅವರ ಬೌದ್ಧಿಕ ಸಾಮರ್ಥ್ಯ, ಛಲ, ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಪರಿಶ್ರಮ ಪಡುವ ಗುಣಗಳನ್ನು ಕಂಡು ನಾನು ಆಶ್ಚರ್ಯಗೊಂಡೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಸ್ತುವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಪಟ್ಟಾಭಿ ಹೇಳಿದರು.  


ಅವರು ಇಲ್ಲಿನ ಬಾಳಂಭಟ್ಟ ಹಾಲಿನಲ್ಲಿ ನಡೆದ ಇತ್ತೀಚೆಗೆ ನಿಧನರಾದ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಸರಸ್ವತಿ ಎಸ್. ರಾವ್ (ಪ್ರಸಿದ್ಧ ಸಮಾಜಶಾಸ್ತ್ರ ಪಠ್ಯಪುಸ್ತಕ ಲೇಖಕರಾದ ಚ.ನ. ಶಂಕರ ರಾವ್ ಅವರ ಧರ್ಮಪತ್ನಿ) ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಯುವಕರನ್ನೂ ನಾಚಿಸುವಂತೆ ನಿರಂತರವಾಗಿ ದುಡಿದು ನಿಗದಿತ ಅವಧಿಯಲ್ಲಿ ನ್ಯಾನೋ ತಂತ್ರಜ್ಞಾನದಂಥ ಕ್ಲಿಷ್ಟ ವಿಷಯದ ಮೇಲೆ ಮಹಾಪ್ರಬಂಧವನ್ನು ಸಿದ್ಧಪಡಿಸಿ ಕೊಟ್ಟದ್ದು ನೋಡಿ ನಾನು ಅಕ್ಷರಶಃ ಬೆರಗಾದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಡಾ. ವಿಶಾಲ, ಡಾ. ಸುಶೀಲಾ ರಾವ್, ಪ್ರದೀಪ ಪೈ, ಡಾ. ಪಾರ್ವತಿ ಜಿ. ಐತಾಳ್, ಮಗಳು ದೀಪ್ತಿ ರಾಹುಲ್ ಸರಸ್ವತಿಯವರ ಸೌಮ್ಯ ಸ್ವಭಾವ, ನಗುಮುಖ, ಕಾಲೇಜಿನ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದ ಅವರ ಬೋಧನಾ ವೈಖರಿ, ಸಾಂಸಾರಿಕ ಜವಾಬ್ದಾರಿಗಳನ್ನು ಉದ್ಯೋಗವನ್ನೂ ಸರಿದೂಗಿಸಿಕೊಂಡು ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದ ಅವರ ಕಾರ್ಯಕ್ಷಮತೆ, ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸುವುದರ ಜತೆಗೆ ನಮ್ಮ ಹೆಮ್ಮೆಯ ಭಾರತೀಯ ವಿಜ್ಞಾನಿಗಳು, ನ್ಯಾನೋ ತಂತ್ರಜ್ಞಾನ, ವಿಷ್ಣು ಸಹಸ್ರಮಾನದ ಶ್ಲೋಕಗಳ ವ್ಯಾಖ್ಯಾನ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ ಅವರ ಬರವಣಿಗೆಯ ಪ್ರತಿಭೆಗಳ ಬಗ್ಗೆ ಮಾತನಾಡಿದರು.

ದೀಪ್ತಿ ಎಸ್. ರಾವ್ ಪ್ರಾರ್ಥನೆ ಹಾಡಿದರು. ಡಾ. ಮಾಧವ ಎಂ.ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ದೇಹಾನ್ತೇ ತವ ಸಾಯುಜ್ಯಂ...

ಸರಸ್ವತಿ ಎಸ್. ರಾವ್ ಅವರು ಅನಾಯಾಸೇನ ಮರಣಂ ಎಂಬ ವಿಷಯದಲ್ಲಿ ಸ್ವಲ್ಪ ಮಟ್ಟಿನ ಸೋಲುಂಡರೂ ಶ್ಲೋಕದ ಅನಂತರದ ವಾಕ್ಯಗಳ ಸಾರ್ಥಕತೆಯನ್ನು ಸಾಧಿಸಿ ಸಾಯುಜ್ಯ ಪಡೆಯುವುದರಲ್ಲಿ ಅನುಮಾನವಿಲ್ಲ. ಅವರ ಸಾಧನಾಯುಕ್ತ ಮತ್ತು ಅನುಕರಣೀಯ ಬದುಕಿನ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ. -ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾ.ಸ್ವ. ಸಂಘ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article