ನ್ಯಾಯಾಲಯಕ್ಕೆ ಕೆಮಿಕಲ್ ಬಾಂಬ್ ಬೆದರಿಕೆ
ಮಂಗಳೂರು: ನಗರದಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಕಳಿಸಿದ್ದು ಬಾಂಬ್ ಪತ್ತೆದಳ ಮತ್ತು ಶ್ವಾನದಳ ಪೊಲೀಸರು ಸ್ಥಳದಲ್ಲಿ ಶೋಧ ನಡೆಸಿದ್ದಾರೆ.
ಮಂಗಳೂರು ಜಿಲ್ಲಾ ಕೋರ್ಟಿನ ಇ-ಮೇಲ್ ವಿಳಾಸಕ್ಕೆ ಅನ್ಬನಂತನ್ ಐಯ್ಯಪ್ಪನ್ ಎಂಬ ಹೆಸರಿನಲ್ಲಿ ಇ-ಮೇಲ್ ಸಂದೇಶ ಬಂದಿದ್ದು ಕೋರ್ಟ್ ಆವರಣದಲ್ಲಿ ಕೆಮಿಕಲ್ ಬಾಂಬ್ ಇಟ್ಟು ಸ್ಟೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇಸ್ರೇಲ್ ದೂತಾವಾಸದೊಂದಿಗೆ ಮಂಗಳೂರು ನ್ಯಾಯಾಲಯವನ್ನೂ ಜೂನ್ 29ರ ಮಧ್ಯಾಹ್ನ ಒಂದು ಗಂಟೆಗೆ ಬಾಂಬಿಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ.
ತನ್ನನ್ನು ಝೆನ್ ಝಿ ಡಿಎಂಕೆ ಲೀಡರ್ ಎಂದು ಹೇಳಿಕೊಂಡಿರುವ ಅನ್ಬನಂತನ್ ಐಯ್ಯಪ್ಪನ್, ಸಂಸದ ಎನ್.ಆರ್. ಇಳಂಗೋವನ್ ನಾಡಿಗೆ ದ್ರೋಹ ಎಸಗಿದ್ದಾರೆ, ಈ ಕಾರಣಕ್ಕಾಗಿ ಬಾಂಬ್ ಹಾಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಎಲ್ಲಾ ನ್ಯಾಯಾಧೀಶರ ಮೂಗು ಮತ್ತು ಬಾಯಿಗಳನ್ನು ಮುಚ್ಚಿ ಅವರನ್ನು ಕೂಡಲೇ ಸ್ಥಳಾಂತರಿಸಿ ಎಂದು ಬೆದರಿಕೆ ಹಾಕಿದ್ದಾನೆ.
ಬಾಂಬ್ ಬೆದರಿಕೆ ಹಿನ್ನೆಲೆ ನ್ಯಾಯಾಲಯ ಆವರಣದಲ್ಲಿ ಬಾಂಬ್ ಪತ್ತೆ ದಳ ಮತ್ತು ಸ್ವಾನದಳದಿಂದ ಶೋಧ ನಡೆಸಲಾಗಿದೆ. ಕೋರ್ಟ್ ಕಟ್ಟಡದ ಎಲ್ಲ ಕೊಠಡಿಗಳಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗಿದೆ. ಕಳೆದ ರಾತ್ರಿ ಇಮೇಲ್ ಬಂದಿದ್ದು ಮಂಗಳೂರು ಪೊಲೀಸರು ಮಧ್ಯಾಹ್ನ ವೇಳೆಗೆ ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಿದ್ದಾರೆ.