‘ಪ್ರಕೃತಿ ರಕ್ಷಕರು’: ಅಂಚೆ ಕಾರ್ಡ್ ಬಿಡುಗಡೆ
Sunday, June 7, 2026
ಮಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಅಂಚೆ ವಲಯದ ವತಿಯಿಂದ ‘ಪ್ರಕೃತಿ ರಕ್ಷಕರು’ ಕುರಿತ ಒಂಬತ್ತು ವಿಶೇಷ ಅಂಚೆ ಕಾರ್ಡ್ಗಳು ಮತ್ತು ವಿಶೇಷ ರದ್ದತಿ ಮುದ್ರೆಯನ್ನು ಬಿಡುಗಡೆಗೊಳಿಸಲಾಯಿತು.
ಶುಕ್ರವಾರ ಬಲ್ಮಠ ಅಂಚೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಅಂಚೆ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಜೀವ ವೈವಿಧ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಂಚೆ ಚೀಟಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಜನರಿಗೆ ತಲುಪಿಸಲು ಅಂಚೆ ಪರಿಣಾಮಕಾರಿಯಾದ ಮಾಧ್ಯಮವಾಗಿದೆ ಎಂದರು.
ಈ ವಿಶೇಷ ಫಿಲಾಟೆಲಿಕ್ ಪ್ರಕಟಣೆಯ ಪ್ರಸ್ತಾವವನ್ನು ಪೋಸ್ಟ್ ಆಫೀಸ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಕರ್ನಲ್ ಅಖಿಲ್ ಕುಮಾರ್ ಸಲ್ಲಿಸಿದ್ದರು. ಚಿತ್ರಕಲೆಯನ್ನು ಪೀವಿ ಅವರು ರಚಿಸಿದ್ದಾರೆ. ಪರಿಸರವಾದಿ ದಿನೇಶ್ ಹೊಳ್ಳ, ದಕ್ಷಿಣ ಕನ್ನಡ ಫಿಲಾಟೆಲಿಕ್ ಮತ್ತು ನ್ಯುಮಿಸ್ಮಾಟಿಕ್ ಅಸೋಸಿಯೇಷನ್ ಅಧ್ಯಕ್ಷ ಪ್ರಭಾಕರ ಕಾಮತ್, ಕರ್ಣಾಟಕ ಬ್ಯಾಂಕ್ನ ಮಹಾಪ್ರಬಂಧಕ ಜಯನಾಗ ರಾವ್ ಉಪಸ್ಥಿತರಿದ್ದರು. ಪಿ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.