ರಾ. ಹೆದ್ದಾರಿ-169ರ ಮಿಜಾರು ಬೆಳ್ಳೆಚ್ಚಾರಿನಲ್ಲಿ ಸುರಕ್ಷತೆಗಾಗಿ ಮೇಲ್ಸೇತುವೆಗೆ ಗ್ರಾಮಸ್ಥರ ಆಗ್ರಹ: ಸಮಸ್ಯೆ ಬಗ್ಗೆ ಶಾಸಕರು, ಸಂಸದರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದ್ದರೂ ಮೌನ
ಬೆಳ್ಳೆಚ್ಚಾರು ಜಂಕ್ಷನ್ನಿಂದ ಇರುವೈಲು, ಕೊನ್ನೆಪದವು, ಮಜ್ಜಿಗುರಿ, ಪೂಪಾಡಿ, ಎಡಪದವು ಹಾಗೂ ಶಾಸ್ತವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಾವಿರಾರು ಜನರ ದೈನಂದಿನ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿದೆ. ಅಲ್ಲದೆ, ಈ ಭಾಗದಲ್ಲಿರುವ ಆರುಕ್ಕೂ ಹೆಚ್ಚು ಜಲ್ಲಿಕಲ್ಲು ಉದ್ದಿಮೆಗಳಿಗೆ ಸೇರಿದ 25ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳು ಪ್ರತಿದಿನ ನೂರಕ್ಕೂ ಹೆಚ್ಚು ಟ್ರಿಪ್ಗಳನ್ನು ನಡೆಸುತ್ತಿರುವುದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ.
ಪ್ರಸ್ತುತ ಹೆದ್ದಾರಿ ವಿನ್ಯಾಸದ ಪ್ರಕಾರ ಮೂಡುಬಿದಿರೆ ಹಾಗೂ ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಇರುವೈಲು ರಸ್ತೆಗೆ ಸುರಕ್ಷಿತವಾಗಿ ತಿರುಗಲು ಅವಕಾಶವಿಲ್ಲ. ಇದರಿಂದ ವಾಹನಗಳು ಸುಮಾರು ಎರಡು ಕಿಲೋಮೀಟರ್ ಸುತ್ತುಬಳಸಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ತಿಳಿಸಿದೆ. ಈ ಕುರಿತು ಈಗಾಗಲೇ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಬಡಗ ಎಡಪದವು ಗ್ರಾಮ ಪಂಚಾಯಿತಿ ವತಿಯಿಂದಲೂ ಅಧಿಕೃತ ಮನವಿ ಸಲ್ಲಿಸಬೇಕೆಂದು ಎಂ. ಸುಧಾಕರ ಪೂಂಜ ಕೋರಿದ್ದಾರೆ.
ಸ್ಥಳೀಯರಾದ ರಾಮಕೃಷ್ಣ ಶೆಟ್ಟಿ ಮಾತನಾಡಿ ಮಿಜಾರು ಬೆಳ್ಳೆಚ್ಚಾರು ಹಳೆಯ ಚೆಕ್ಪೋಸ್ಟ್, ಪ್ರಸ್ತುತ ಕೊಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಆಳ್ವಾಸ್ ಮೆಡಿಕಲ್ ಕಾಲೇಜು ಎದುರಿನ ಭಾಗದಲ್ಲಿ ರಸ್ತೆ ದಾಟಲು ಸುರಕ್ಷಿತ ವ್ಯವಸ್ಥೆ ಇಲ್ಲದ ಕಾರಣ ಒಂದೇ ವಾರದಲ್ಲಿ ನಾಲ್ಕು ಅಪಘಾತಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ.
ಹರಿಮಿನಾಕ್ಷಿ ದೋಟದ ಸುರೇಶ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ, ರಿಯಾಜ್, ಹಕೀಮ್, ಮನ್ಸೂರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಮಾನವ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಹೆದ್ದಾರಿ ಸಮಸ್ಯೆಗಳಿಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.


