ಎಕ್ಸಲೆಂಟ್ ನ ಯುವರಾಜ್ ಜೈನ್ ಗೆ“ಭಾರತ್ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್”
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದ ಎಕನಾಮಿಕ್ ಗ್ರೋಥ್ ಫೌಂಡೇಶನ್ ಸಂಸ್ಥೆಯ ವಾರ್ಷಿಕ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿಯ ನಾಯಕತ್ವ, ಮೌಲ್ಯಾಧಾರಿತ ಶಿಕ್ಷಣದ ಅನುಷ್ಠಾನ, ಸಾಮಾಜಿಕ ಕಾಳಜಿ ಹಾಗೂ ಸಂಶೋಧನಾ ಮನೋಭಾವದ ಮೂಲಕ ಸಲ್ಲಿಸಿದ ಗಮನಾರ್ಹ ಕೊಡುಗೆಗಳನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ.
ಯುವರಾಜ್ ಜೈನ್ ಅವರ ಶೈಕ್ಷಣಿಕ ಪಯಣವು ಪ್ರಶಸ್ತಿಗಳ ಸಂಗ್ರಹಕ್ಕಿಂತಲೂ ಸಾಧನೆಗಳ ಇತಿಹಾಸವಾಗಿ ಗುರುತಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ, ಶಿಸ್ತು, ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಸಮನ್ವಯಕ್ಕೆ ಅವರು ನೀಡಿರುವ ಆದ್ಯತೆ, ವಿವಿಧ ವೇದಿಕೆಗಳಲ್ಲಿ ನಿರಂತರವಾಗಿ ಪ್ರಶಂಸೆಗೆ ಪಾತ್ರವಾಗಿದೆ.
2003ರಲ್ಲಿ ನವದೆಹಲಿಯ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಪ್ರದಾನವಾದ “ಗ್ಲೋಬಲ್ ಅಂಬಾಸಿಡರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್” ಅವರ ಶೈಕ್ಷಣಿಕ ನಾಯಕತ್ವಕ್ಕೆ ದೊರೆತ ಪ್ರಮುಖ ಅಂತರರಾಷ್ಟ್ರೀಯ ಮನ್ನಣೆಯಾಗಿತ್ತು.
ಅನಂತರ 2021ರಲ್ಲಿ “ಶಿಕ್ಷಣ ರತ್ನ ಪ್ರಶಸ್ತಿ”, 2022ರಲ್ಲಿ “ಮಿಲನಶ್ರೀ ಪ್ರಶಸ್ತಿ”, 2023ರಲ್ಲಿ “ಸಮಾಜ ಮಂದಿರ ಪುರಸ್ಕಾರ”, 2024ರಲ್ಲಿ “ಸಿರಿಪುರ ಪ್ರಶಸ್ತಿ”, “ಶಿಕ್ಷಣ ಭೀಷ್ಮ ಪ್ರಶಸ್ತಿ” ಹಾಗೂ “ವಿಶ್ವಶಾಂತಿ ವಿದ್ಯಾ ಸೇವಾ ರತ್ನ ಪ್ರಶಸ್ತಿ”ಗಳು ಅವರಿಗೆ ಸಂದಿವೆ.
2025ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಜೈನ ಸಮ್ಮೇಳನದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗೆ ಲಭಿಸಿದ “ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ” ಗೌರವವು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಮತ್ತು ಮೌಲ್ಯಾಧಾರಿತ ಕಾರ್ಯವೈಖರಿಗೆ ದೊರೆತ ಜಾಗತಿಕ ಮಾನ್ಯತೆಯಾಗಿ ಪರಿಗಣಿಸಲಾಗಿದೆ.
ಇದೇ ಅವಧಿಯಲ್ಲಿ ಗೋಪಾಲಕೃಷ್ಣ ಪ್ರತಿಷ್ಠಾನ, ಸಂಪಾಜೆ ವತಿಯಿಂದ “ಕೇಶವಾನಂದ ಭಾರತಿ ಶಿಕ್ಷಣ ಪ್ರಶಸ್ತಿ” ಪ್ರದಾನಗೊಂಡಿದ್ದು, ಅಂತರರಾಷ್ಟ್ರೀಯ ಜೆಸಿಐ ಸಂಸ್ಥೆಯು ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ “ಸಾಧನಶ್ರೀ ಪ್ರಶಸ್ತಿ” ಹಾಗೂ “ಕಮಲ ಪತ್ರ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅವರ ನಾಯಕತ್ವ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ಸಂಘಟನಾ ಕೌಶಲ್ಯವನ್ನು ಪರಿಗಣಿಸಿ, ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ವು ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.