ಮೂಡಬಿದ್ರೆ ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ
ಯಕ್ಷಶಿಕ್ಷಣದ ಮೂಡುಬಿದಿರೆ-ಕಾರ್ಕಳ ವಲಯದ ಸಂಚಾಲಕರಾದ ಮಹಾವೀರ ಪಾಂಡಿ ಅವರು ಮಾತನಾಡಿ, "ವಿದ್ಯಾರ್ಥಿಗಳಿಗೆ ಯಕ್ಷಗಾನದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಶ್ರಮಿಸುತ್ತಿದೆ . 102 ಶಾಲೆಗಳಲ್ಲಿ ಸುಮಾರು 7500 ವಿದ್ಯಾರ್ಥಿಗಳು 70 ಯಕ್ಷಗುರುಗಳ ತೊಡಗಿಸುವಿಕೆಯ ಮೂಲಕ ಯಕ್ಷಶಿಕ್ಷಣವು ಯಶಸ್ವಿಯಾಗುತ್ತಿದೆ" ಎಂದು ಹೇಳಿದರು.
ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಎಂ. ಶಾಂತಾರಾಮ ಕುಡ್ವ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಲಾಡಿ ರವಿಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ಭಟ್ ಸಂದರ್ಭೋಚಿವಾಗಿ ಮಾತನಾಡಿದರು.
ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಕಾರ್ಯದರ್ಶಿ ಅರುಣ್ ಕುಮಾರ್, ಸೇವಾಂಜಲಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಎಸ್.ಎನ್. ಬೋರ್ಕರ್, ಯಕ್ಷ ಶಿಕ್ಷಕ ಪ್ರಥ್ವೀಶ್ ಪರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಪ್ರಿಯಾ ವಂದಿಸಿದರು.
