ಜು.12ರಂದು ‘ಬ್ಯಾಂಕ್ಆಫ್ ಮಹಾರಾಷ್ಟ್ರ ರಿಮ್ಜಿಮ್’ ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ
ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಜು.12ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ‘ಬ್ಯಾಂಕ್ಆಫ್ ಮಹಾರಾಷ್ಟ್ರ ರಿಮ್ಜಿಮ್’ ಎಂಬ ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತ ಭಾರತಿ ಫೌಂಡೇಶನ್ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು.
ಕಾರ್ಯಕ್ರಮದ ಪೂರ್ವಾಧದಲ್ಲಿ ಶ್ರೇಷ್ಠ ಸಿತಾರ್ ವಾದಕ ಬೆಂಗಳೂರಿನ ಸಂಜೀವ್ ಕೊರ್ತಿ ಅವರಿಂದ ಸಿತಾರ್ ವಾದನ ನಡೆಯಲಿದ್ದು, ಉತ್ತರಾರ್ಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಪಂ.ಶಶಾಂಕ್ ಮಕ್ತೇದಾರ್ ಗೋವಾ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ತಬ್ಲಾದಲ್ಲಿ ಗೋವಾದ ಮಯಾಂಕ್ ಬೆಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಶಿರಸಿಯ ಗುರುಪ್ರಸಾದ್ ಹೆಗೆಡೆ ಸಾಥ್ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಭಾರತದ ಸಮೃದ್ಧ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಸಂಗೀತ ಭಾರತಿ ಫೌಂಡೇಶನ್ 2026ರಲ್ಲಿ ಹಮ್ಮಿಕೊಂಡಿರುವ ಶಾಸ್ತ್ರೀಯ ಸಂಗೀತದ ಏಳು ಕಾರ್ಯಕ್ರಮಗಳ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಗೀತ ಭಾರತಿ ಫೌಂಡೇಶನ್ನ ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿಗಳಾದ ಅಂಕುಶ್ ಎನ್. ನಾಯಕ್, ಮುರುಳೀಧರ್ ಜಿ. ಶೆಣೈ, ಖಜಾಂಚಿ ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು.