ಜು.15 ರಂದು ಆಧುನಿಕ ಈಜುಕೊಳ ಅಭಿಸರಣ್ ಅಕ್ವಾಟಿಕ್ ಸೆಂಟರ್ನ ಲೋಕಾರ್ಪಣೆ
ಮಂಗಳೂರು: ನಗರದ ಕೊಟ್ಟಾರ ಬಂಗ್ರಕೂಳೂರಿನ ತ್ರಿಶಾ ಕಾಲೇಜು ಸಮೀಪ ಮಲಾಡಿ ಎಸ್ಟೇಟ್ ರಸ್ತೆಯಲ್ಲಿನ ಆಧುನಿಕ ಈಜುಕೊಳ ಅಭಿಸರಣ್ ಅಕ್ವಾಟಿಕ್ ಸೆಂಟರ್ನ ಲೋಕಾರ್ಪಣೆ ಕಾರ್ಯಕ್ರಮ ಜು.15ರಂದು ಸಂಜೆ 4.30ಕ್ಕೆ ನಡೆಯಲಿದೆ.
ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಒಲಿಂಪಿಕ್ಸ್ ಈಜುಗಾರ್ತಿ ಶಿವಾಣಿ ಕಟಾರಿಯಾ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುವರು. ಉಡುಪಿ ಅಂಬಲಪಾಡಿ ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷ ಸಂಜಯ ಸುವರ್ಣ, ನಿಕಟಪೂರ್ವ ಕಾರ್ಪೋರೇಟರ್ಗಳಾದ ಸುಮಂಗಲಾ, ಕಿರಣ್ ಕುಮಾರ್, ಅನಿಲ್ ಕುಮಾರ್ ಭಾಗವಹಿಸುವರು ಎಂದು ಸಂಸ್ಥೆಯ ತರಬೇತುದಾರ ಸಂಕೇತ್ ಬೆಂಗ್ರೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿಸರಣ್ ಅಕ್ವಾಟಿಕ್ ಸೆಂಟರ್ ಈಜು ತರಬೇತಿ, ದೈಹಿಕ ಕ್ಷಮತೆ, ಜಲಸುರಕ್ಷತೆ ಹಾಗೂ ಸ್ಪರ್ಧಾತ್ಮಕ ಈಜು ತರಬೇತಿಗೆ ಸಮರ್ಪಿತವಾದ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ಎಲ್ಲ ವಯೋಮಾನದವರಿಗೂ ಸುರಕ್ಷಿತ, ವೃತ್ತಿಪರ, ಸಮಗ್ರ ಈಜು ತರಬೇತಿ ಒದಗಿಸುವ ಉದ್ದೇಶ ಹೊಂದಿದೆ. 25 ಮೀಟರ್ ಅಂತಾರಾಷ್ಟ್ರೀಯ ಮಾನದಂಡದ ಶಾರ್ಟ್ ಕೋರ್ಸ್ ಈಜುಕೊಳ ಇದಾಗಿದ್ದು, 10 ಲೇನ್ಗಳನ್ನು, ಅತ್ಯಾಧುನಿಕ ನೀರು ಶುದ್ಧೀಕರಣ ವ್ಯವಸ್ಥೆ, ಅಂತಾರಾಷ್ಟ್ರೀಯ ಸ್ವಚ್ಛತಾ ಮಾನದಂಡಗಳಿಗೆ ಅನುಗುಣವಾಗಿ ನೀರಿನ ಗುಣಮಟ್ಟದ ನಿಯಮಿತ ಪರಿಶೀಲನೆ, ನಿರ್ವಹಣೆ ಇರಲಿದೆ. ಸುಸಜ್ಜಿತ 40-50 ಕಾರು ಪಾರ್ಕಿಂಗ್ ವ್ಯವಸ್ಥೆ, ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ, ಆಧುನಿಕ, ಸುಸಜ್ಜಿತ ಬದಲಾವಣೆ ಕೊಠಡಿಗಳು ಇದೆ. ಅರ್ಹ ಹಾಗೂ ತರಬೇತಿ ಪಡೆದ ಜೀವರಕ್ಷಕರು ಸದಾ ಕರ್ತವದ್ದಲ್ಲಿರುತ್ತಾರೆ. ಬೆಳಗ್ಗೆ 6ರಿಂದ 10ರ ವರೆಗೆ ಹಾಗೂ ಸಂಜೆ 3ರಿಂದ ರಾತ್ರಿ 8 ಗಂಟೆ ವರೆಗೆ ಕಾರ್ಯನಿರ್ವಹಣೆ ಸಮಯ. ಮಧ್ಯಾಹ್ನ 3ರಿಂದ ಸಂಜೆ 4ರ ವರೆಗೆ ಮಹಿಳೆಯರಿಗೆ ಮಾತ್ರ ವಿಶೇಷ ಈಜು ಅವಽ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಶಶಿಕುಮಾರ್ ಬೆಂಗ್ರೆ, ಸಬಿತಾ, ಶಿಲ್ಪಾ ಬೆಂಗ್ರೆ, ನಿರೂಪಕ ಸಾಹಿಲ್ ರೈ ಉಪಸ್ಥಿತರಿದ್ದರು.