ನಕಲಿ ನೋಟು ಮುದ್ರಣ ಜಾಲ ಬಯಲು: 500 ಮುಖಬೆಲೆಯ ಬಂಡಲ್ ವಶ
ಮಂಗಳೂರು: ಉಪ್ಪಿನಂಗಡಿ ಬಳಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು 500 ಮುಖಬೆಲೆಯ ನೋಟುಗಳ ಬಂಡಲ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ಬಳಿಯ ಕಾಣಿಯೂರು ಗ್ರಾಮದ ಅಡಿಂಜೆ ಎಂಬಲ್ಲಿ ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಮಾರಾಟಕ್ಕೆ ಸಿದ್ಧ ಮಾಡುತ್ತಿದ್ದಾಗಲೇ ಬಂಧಿಸಿದ್ದಾರೆ.
ಪುತ್ತೂರು ನಿವಾಸಿ ಇಬ್ರಾಹಿಂ, ಕೇರಳದ ಕಾಸರಗೋಡು ನಿವಾಸಿ ಶರೀಫ್, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಿವಾಸಿ ಸಂದೀಪ್, ಕಾಸರಗೋಡು ನಿವಾಸಿ ಮೊಹಮ್ಮದ್ ನವಾಸ್, ಪುತ್ತೂರು ನಿವಾಸಿ ಸಲ್ಮಾನ್, ಬೆಳ್ತಂಗಡಿ ನಿವಾಸಿ ಸಿರಾಜುದ್ದಿನ್ ಮತ್ತು ಇರ್ಷಾದ್ ಬಂಧಿತರು.
ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕನ್ನಡ ಎಸ್ಪಿ ಅರುಣ್ ನೇತೃತ್ವದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು ನಾಲ್ಕು ಮನೆಗಳಿದ್ದ ಕಟ್ಟಡವನ್ನು ಬಾಡಿಗೆ ಪಡೆದು ನಕಲಿ ನೋಟು ತಯಾರಿಸುವ ಫ್ಯಾಕ್ಟರಿ ಮಾಡಿಕೊಂಡಿದ್ದರು. ಬೆಳ್ತಂಗಡಿಯ ಸಿರಾಜುದ್ದೀನ್ ಈ ನಕಲಿ ನೋಟು ಜಾಲದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು ದಾಳಿಯ ವೇಳೆ 500 ಮುಖಬೆಲೆಯ ನಕಲಿ ನೋಟುಗಳ ಬಂಡಲ್ ಪತ್ತೆಯಾಗಿದೆ.
ಕಾಣಿಯೂರು ಬಳಿಯ ಅಡಿಂಜೆ ನಿವಾಸಿ ಇದ್ರಿಸ್ ಎಂಬವರಿಗೆ ಸೇರಿದ ನೂತನ ಕಟ್ಟಡದಲ್ಲಿ ಮೂರು ಮನೆಗಳನ್ನು ಬಾಡಿಗೆಗೆ ಪಡೆದಿದ್ದ ಸಿರಾಜುದ್ದೀನ್, ಅದರಲ್ಲಿ ಪ್ರಿಂಟರ್ ಇನ್ನಿತರ ಅತ್ಯಾಧುನಿಕ ಯಂತ್ರಗಳನ್ನು ಇಟ್ಟು ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದರು. ದಾಳಿ ಸಂದರ್ಭ ನಕಲಿ 500 ರೂ. ನೋಟುಗಳ ಬಂಡಲ್, 21 ಎ4 ಶೀಟ್ಗಳಲ್ಲಿ ಮುದ್ರಿಸಿ ಇಟ್ಟಿದ್ದ ನೋಟುಗಳು, ಪ್ರಿಂಟರ್, ಮಾನಿಟರ್, ಸಿಪಿಯು, ಕಟಿಂಗ್ ಬ್ಲೇಡ್, ಗಾಂಧೀಜಿ ಚಿತ್ರದ ಸೀಲ್ ಹಾಗೂ ಆರ್ಬಿಐ ಭದ್ರತಾ ಸೆಕ್ಯುರಿಟಿ ಥ್ರೆಡ್ ಸೇರಿದಂತೆ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಾರಿಗೂ ಶಂಕೆ ಬಾರದ ರೀತಿಯಲ್ಲಿ ನಕಲಿ ನೋಟು ತಯಾರಿಸುವ ಕಾರ್ಖಾನೆಯನ್ನು ಮಾಡಿಕೊಂಡಿದ್ದರು. ನೋಟುಗಳನ್ನು ಪ್ರಿಂಟ್ ಮಾಡಿ ಬೇರೆ ಕಡೆಯಲ್ಲಿ ಸಪ್ಲೈ ಮಾಡಲು ಸ್ಕೆಚ್ ಹಾಕಿದ್ದರು. ಒಂದು ತಿಂಗಳಿನಿಂದ ಈ ಕೆಲಸ ಮಾಡುತ್ತಿದ್ದು ಹೆಚ್ಚಿನ ತನಿಖೆ ಆಗಬೇಕಾಗಿದೆ ಎಂದು ದ. ಕ. ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.