ಮಂಗಳೂರು: ವಿದ್ಯಾರ್ಥಿ ಯುವಜನರು ಒಂದಾದರೆ ಎಂತಹ ಸವಾಲನ್ನು ಕೂಡ ಎದುರಿಸಿ ಸಾಧಿಸಬಹುದೆಂದು ನೀಟ್ ವಿರುದ್ಧ ದೇಶಾದ್ಯಂತ ನಡೆದ ಹೋರಾಟವೇ ಸಾಕ್ಷಿ. ನಾಯಕರೆಂದರೆ ಕೇವಲ ಅಧಿಕಾರದ ಗದ್ದುಗೆಯಲ್ಲಿ ಕೂತರಷ್ಟೇ ಸಾಲದು ಅಧಿಕಾರವಿಲ್ಲದೆಯೂ ಜನಪರವಾಗಿ ನಿಲ್ಲೋದೇ ನಿಜವಾದ ನಾಯಕತ್ವ.ಅದನ್ನು ವಿದ್ಯಾರ್ಥಿ ಮುಖಂಡರು ತೋರಿಸಿಕೊಟ್ಟಿದ್ದಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಟಿ.ಸಿ.ಎಮ್. ಶರೀಫ್ ಹೇಳಿದರು.
ಇಂದು ಬಜಾಲ್ ಪಕ್ಕಲಡ್ಕದ ಭಗತ್ ಸಿಂಗ್ ಭವನದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ನಡೆದ ಬಜಾಲ್ ವಿಭಾಗ ಮಟ್ಟದ ಯುವಜನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ಆಶಯ, ಆದರ್ಶಗಳನ್ನು ಮೈಗೂಡಿಸಿಕೊಂಡು ಹೆಚ್ಚು ಹೆಚ್ಚು ಸಂಘಟಿತರಾಗಿ ವಿದ್ಯಾರ್ಥಿ ಯುವಜನ ಚಳುವಳಿಯನ್ನು ಮುನ್ನಡೆಸಬೇಕು. ಶಿಕ್ಷಣದ ಖಾಸಗೀಕರಣ, ನಿರುದ್ಯೋಗ ಸೇರಿದಂತೆ ದೇಶದ ಜನಸಾಮಾನ್ಯರನ್ನು ಭಾದಿಸುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಇದು ಸರಿಯಾದ ಸಮಯ. ಕೇಂದ್ರ ಸರಕಾರ ಜಾರಿ ತರುವ ಜನವಿರೋಧಿ ನೀತಿಗಳ ವಿರುದ್ಧ ಇಂತಹ ಮಾದರಿ ಹೋರಾಟಗಳು ಹೆಚ್ಚು ಹೆಚ್ಚು ಸಂಘಟಿಸಬೇಕಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಮೇಲೆ ನಡೆದ ಹೋರಾಟಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಲೆದಂಡದಿಂದ ಹೋರಾಟ ಗೆಲುವು ಸಾಧಿಸಿದೆ. ಈ ಗೆಲುವು ಸರ್ವಾಧಿಕಾರಿಯಂತೆ ವರ್ತಿಸುವ ನರೇಂದ್ರ ಮೋದಿ ಆಡಳಿತಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಎಡಪಂಥೀಯ ಡಿವೈಎಫ್ಐ ಸಂಘಟನೆ ದೇಶದಲ್ಲಿ ನಡೆದಿರುವ ವಿದ್ಯಾರ್ಥಿ, ಯುವಜನರ ಚಳುವಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಕಾರಣಕ್ಕೆ ಈ ಹೋರಾಟ ಧಿಕ್ಕು ತಪ್ಪದೇ ಅದರ ಸ್ಪಷ್ಟ ಗುರಿ ತಲುಪಲು ಸಾಧ್ಯವಾಗಿದೆ. ಡಿವೈಎಫ್ಐ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲೂ ಹೆಚ್ಚು ಪ್ರಬಲಶಾಲಿಯಾಗಿ ಬೆಳೆದು ಬರಲಿ ಎಂದರು.

ಡಿವೈಎಫ್ಐ ಮಾಜಿ ರಾಜ್ಯ ಅಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಬಜಾಲ್ ಪ್ರದೇಶದ ಡಿವೈಎಫ್ಐ ಸಂಘಟನೆ ದ.ಕ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು, ಕ್ರಾಂತಿಕಾರಿ ಹಿನ್ನಲೆಯನ್ನೂ ಕೂಡ ಹೊಂದಿದೆ. ಕಾಂ ಭಾಸ್ಕರ್ ಕುಂಬಳೆ, ಕಾಂ ಶ್ರೀನಿವಾಸ್ ಬಜಾಲ್ ಅವರು ಈ ಪ್ರದೇಶದಲ್ಲಿ ಹುತಾತ್ಮರಾಗಿದ್ದು ಅವರ ಆದರ್ಶ ತ್ಯಾಗ ಬಲಿದಾನವನ್ನು ಇವತ್ತಿಗೂ ನೆನಪಿಸುತ್ತಾ ಯುವಜನ ಚಳುವಳಿಯನ್ನು ಜೀವಂತವಾಗಿರಿಸುವ ಮೂಲಕ ಕೋಮುವಾದಕ್ಕೆ ಎದುರಾಗಿ ಸಾಮರಸ್ಯದ ನಾಡನ್ನು ಕಟ್ಟುವಲ್ಲಿ ಇಲ್ಲಿನ ಡಿವೈಎಫ್ಐ ಸಂಘಟನೆಯ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಪ್ರತಿನಿಧಿ ಅಧಿವೇಶನವನ್ನು ಉದ್ಘಾಟಿಸಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ನಿತಿನ್ ಕುತ್ತಾರ್ ಮಾತನಾಡಿದರು. ಮಂಗಳೂರು ನಗರ ಕಾರ್ಯದರ್ಶಿ ತಯ್ಯೂಬ್ ಬೆಂಗರೆ, ನಗರದ ಮುಖಂಡರಾದ ಚರಣ್ ಶೆಟ್ಟಿ ಪಂಜಿಮೊಗರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಮುಖಂಡರಾದ ಸುಮಂಗಲ, ಜಿಲ್ಲಾ ಸಮಿತಿ ಸದಸ್ಯ ಪುನೀತ್ ಉರ್ವಸ್ಟೋರ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಡಿವೈಎಫ್ಐ ಕಾರ್ಯದರ್ಶಿ ಧೀರಾಜ್ ಬಜಾಲ್ ಸ್ವಾಗತಿಸಿದರು ಜಗದೀಶ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಯಶ್ ರಾಜ್ ಬಜಾಲ್ ವಂದಿಸಿದರು.
ಸಮ್ಮೇಳನ ಪ್ರಾರಂಭಕ್ಕೂ ಮುನ್ನ ಪಕ್ಕಲಡ್ಕ ಬಸ್ ನಿಲ್ದಾಣದಿಂದ ಸಮ್ಮೇಳನದ ವಠಾರದವರೆಗೆ ಆಕರ್ಷಕ ಮೆರವಣೆಗೆ ನಡೆಸಿದರು. ದೆಹಲಿ ವಿದ್ಯಾರ್ಥಿ ಚಳುವಳಿಯ ಗೆಲುವನ್ನು ಘೋಷಣೆಗಳನ್ನು ಕೂಗುವ ಮೂಲಕ ಸಂಭ್ರಮಾಚರಿಸಿದರು.
ಸಮ್ಮೇಳನದಲ್ಲಿ 25 ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅದ್ಯಕ್ಷರಾಗಿ ಧೀರಾಜ್ ಬಜಾಲ್, ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಪ್ರೀತೇಶ್ ಬಜಾಲ್ ಸೇರಿದಂತೆ 11 ಮಂದಿ ಕಾರ್ಯದರ್ಶಿ ಮಂಡಳಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.