ತೋಟಗಾರಿಕೆ ಬೆಳೆಗಳಲ್ಲಿ ರಂಬುಟಾನ್: ಮಾಹಿತಿ ಕಾರ್ಯಕ್ರಮ
ಜವುಳಿ ಉದ್ಯಮಿ, ಕೃಷಿಕ ಪ್ರಭಾಚಂದ್ರ ಜೈನ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಳ್ಳಿಯ ಜೀವನ ಕ್ರಮದಲ್ಲಿ, ಕೃಷಿಯಲ್ಲಿಕಷ್ಟವಿದ್ದರೂ ನೆಮ್ಮದಿ ಇದೆ. ಆದರೆ ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡವರ ಮುಂದಿನ ತಲೆಮಾರು ಕೃಷಿಯನ್ನು ಮುಂದುವರಿಸುವರೇ ಎಂಬುದಕ್ಕೆ ಸಮರ್ಪಕ ಉತ್ತರ ಲಭಿಸುತ್ತಿಲ್ಲ ಎಂದರು.
ಕೇಂದ್ರದ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ಕೃಷಿ ವಿಜ್ನಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಅವರು ಮಾತನಾಡಿ ಅಡಿಕೆಗಿಂತ ಹೆಚ್ಚು ವೆಚ್ಚ, ಆರೈಕೆ ಕ್ರಮ ಅನುಸರಿಸಬೇಕಾಗಿರುವ ರಂಬುಟಾನ್ ಬೆಳೆಯನ್ನು ಯೂಟ್ಯೂಬ್ ನೋಡಿ ಮಾಡಲು ಹೊರಡದಿರಿ, ಒಳ್ಳೆಯ ತೋಟಗಳನ್ನು ಪ್ರತ್ಯಕ್ಷ ವೀಕ್ಷಿಸಿ, ವಿಜ್ಞಾನಿಗಳ ಸಹಿತ ಅನುಭವಿಗಳ ಮಾರ್ಗದರ್ಶನದೊಂದಿಗೆ ರಂಬುಟಾನ್ ಬೆಳೆಯಿರಿ ಎಂದು ಹೇಳಿದರು.
ಮಂಗಳೂರಿನ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ್ ಎನ್. ಅವರು ತೋಟಗಾರಿಕೆ ಬೆಳೆಗಳಲ್ಲಿ ಮಿತವ್ಯಯ ನೀರಾವರಿ ಪದ್ದತಿ ಬಗ್ಗೆ ಮಾಹಿತಿ ನೀಡಿದರು. ಮಳೆಗಾಲ ಹೊರತು ಪಡಿಸಿ ಅಡಿಕೆಗೆ 20 ಲೀ., ತೆಂಗಿಗೆ 60-65 ಲೀ. ನೀರು ಒದಗಿಸಬೇಕಾಗಿಸಬೇಕಾದುದನ್ನು ತಿಳಿಸಿದ ಅವರು ಒಂದೇ ಮೂಲದಿಂದ ನೀರು ಒದಗಿಸುವಾಗ ಸೂಕ್ತ ಪ್ರಮಾಣದಲ್ಲಿ ನೀರು ಲಭ್ಯವಾಗುವ ಹಾಗೆ ಯಾಂತ್ರೀಕತೆಯನ್ನು ಹೊಂದಿಸಿಕೊಳ್ಳಬೇಕಾಗಿದೆ ಎಂದರು.
ಇಂದಿರಾ ಶೆಟ್ಟಿ, ಕುಪ್ಪೆಪದವು ಮನೋಹರ ಶೆಟ್ಟಿ, ಜಿನೇಂದ್ರ ಜೈನ್ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
ಸೋನ್ಸ್ ಫಾರ್ಮ್ ನ ಸುನಿಲ್ ಸೋನ್ಸ್ ತೆಂಗಿನ ಹಿಂಗಾರದಿಂದ ಆರೋಗ್ಯವರ್ಧಕ ಕಲ್ಪರಸ ತಯಾರಿಸುವ ಜಿಲ್ಲಾ ಮಟ್ಟದ ಸಹಕಾರಿ ಸಂಘಟನೆಯ ಬಗ್ಗೆ ತಿಳಿಸಿದರು. ಆಳ್ವಾಸ್ ರೇಡಿಯೋದ ಆರ್ಜಿತ್ ಜೈನ್ ಕೃಷಿ ಕಾರ್ಯಕ್ರಮ ಪ್ರಸಾರ ಕುರಿತು ಸಹಕಾರ ಬಯಸಿದರು. ಟಾಟಾ ಎಐಜಿ ಅಧಿಕಾರಿಗಳು ಹವಾಮಾನ ಆಧಾರಿತವಾಗಿ ಅಡಿಕೆ, ಕಾಳುಮೆಣಸು ಕೃಷಿಗಳಿಗೆ ಸಂಬಂಧಿಸಿದ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.
ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಕೋಶಾಧಿಕಾರಿ ಲಿಡ್ವಿನ್ ಡಿಕೋಸ್ತ ಸಹಿತ ಪ್ರಮುಖರು ಅತಿಥಿಗಳನ್ನು ಗೌರವಿಸಿದರು. ಮಾಜಿ ಅಧ್ಯಕ್ಷ ಜಿನೇಂದ್ರ ಜೈನ್ ನಿರೂಪಿಸಿ ಕಾರ್ಯದರ್ಶಿ ಹರೀಶ್ ಆರ್. ಕೋಟ್ಯಾನ್ ವಂದಿಸಿದರು.