ನೇಪಾಳ ಮೂಲದ ಕುಖ್ಯಾತ ಅಂತರ್ ರಾಷ್ಟ್ರ ಮನೆಗಳ್ಳರ ಬಂಧನ: ಚಿನ್ನಾಭರಣ ವಶಕ್ಕೆ
ಬಂಧಿತರನ್ನು ನೇಪಾಳದವರಾದ ತಿಲಕ್ ಕುಮಾರ್ ಖಡ್ಕ ಯಾನೆ ತಿಲಕ್ ಖಡ್ಕ (36), ಅಶೋಕ್ ರಾಜ್ ಯಾನೆ ಅಶೋಕ್ ಸಿಂಗ್ ಯಾನೆ ಅಶೋಕ್ ಸಿಂಗ್ ಠಾಕುರಿ (33), ದಿಪೆಂದರ್ ರಸೈಲಿ (25) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಮಂಗಳೂರು ನಗರದ, ಉರ್ವ ಮಾರ್ಕೆಟ್ ಬಳಿ ಮಠದಕಣಿಯ ಮನೆಯಲ್ಲಿ ಜ.11 ರಂದು ಸಂಜೆ 7.30 ರ ಸುಮಾರಿಗೆ ಮನೆಯವರು ಮನೆಗೆ ಲಾಕ್ ಮಾಡಿಕೊಂಡು ಬಂಟ್ವಾಳ ತಾಲೂಕಿನ, ವಿಟ್ಲ ಕಡಂಬು ಎಂಬಲ್ಲಿರುವ ಅವರ ಸಂಬಂಧಿಕರ ಮನೆಗೆ ತೆರಳಿದ್ದು, ಜು.12 ರಂದು ಬೆಳಗ್ಗೆ ಬಂದು ನೋಡಿದಾಗ ಮನೆಯ ಹಿಂಬಾಗದ ಬಾಗಿಲು ಒಡೆದು ಯಾರೋ ಕಳ್ಳರು ಮನೆಯಲ್ಲಿದ್ದ ಸುಮಾರು 64 ಗ್ರಾಮ್ ತೂಕದ ಚಿನ್ನಾಭರಣ ಹಾಗೂ 25,000 ರೂ. ಸೇರಿದಂತೆ ಒಟ್ಟು 8,57,000 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.
ಜು.17 ರಂದು ಬರ್ಕೆ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಬೆಳಗ್ಗಿನ ಜಾವ ನೇಪಾಳ ಮೂಲದ 3 ಜನ ಕುಖ್ಯಾತ ಮನೆಗಳ್ಳರನ್ನು ಬೋಳೂರಿನಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿ, ಆರೋಪಿತರ ವಶದಿಂದ ಬರ್ಕೆ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಭಂಧಿಸಿದಂತೆ ಎಲ್ಲಾ ಚಿನ್ನಾಭರಣಗಳು ಮತ್ತು ಆರೋಪಿತರು ಮಹಾರಾಷ್ಟ್ರ ರಾಜ್ಯದ ನಾಸಿಕ್ ನಗರದಲ್ಲಿ ಕಳ್ಳತನ ಮಾಡಿದ 790 ಗ್ರಾಂ. ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಮಾರ್ಚ್ ತಿಂಗಳಿನಲ್ಲಿ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಯತ್ನ ಪಟ್ಟಿದ್ದು, ಆ ಕೃತ್ಯವನ್ನು ಇವರೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ರಾಜ್ಯದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿದ್ದು, ಇವರ ಮೇಲೆ ಪ್ರಕರಣ ದಾಖಲಾಗಿವೆ. ಅಲ್ಲದೆ ತಮಿಳುನಾಡು, ದೆಹಲಿ, ಹರ್ಯಾಣ ರಾಜ್ಯಗಳಲ್ಲಿ ಆರೋಪಿತರ ಮೇಲೆ ಪ್ರಕರಣ ದಾಖಲಾಗಿದ್ದು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.