ಸಾಹಿತ್ಯ ಮತ್ತು ಶಿಕ್ಷಣದ ಮೂಲಕ ಸುಸಂಕೃತ ನಾಗರಿಕ ಸಮಾಜ ನಿರ್ಮಾಣ: ಸಾಹಿತಿ ಚಂದ್ರಕಲಾ ನಂದಾವರ
ನಗರದ ಡೊಂಗರಕೇರಿಯಲ್ಲಿರುವ ಸುಧೀಂದ್ರ ಸಭಾಂಗಣದಲ್ಲಿ ಮಿತ್ರ ಮಂಡಳಿ 2.0 ಪುನಶ್ಚೇತನದ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತಿಹಾಸ ತಿಳಿದವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ. ಮಿತ್ರ ಮಂಡಳಿಯ ಆಧಾರ ಸ್ತಂಭಗಳಾಗಿದ್ದ ಜೋಡು ಮಠ ವಾಮನ ಭಟ್, ಎಂ.ಎನ್.ಕಾಮತ್, ಪೇಜಾವರ ಸದಾಶಿವ ರಾವ್, ಕಣಂದೂರು ತಿಮ್ಮಯಾಚಾರ್, ಕಣಂದೂರು ರಾಘವಾಚಾರ್ ಸಹಿತ ಅನೇಕ ಹೆಸರುಗಳನ್ನು ಉದಾಹರಿಸಿದ ಅವರು ಎಲ್ಲರ ಪ್ರಯತ್ನದಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಯಿತು. ಅಂದು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಅನೇಕ ಶಿಕ್ಷಕರು, ವಕೀಲರು ಸಾಹಿತ್ಯದ ಕೃಷಿಗಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇಂದಿನ ಶಿಕ್ಷಣ ಯುಗದಲ್ಲಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಆದರೆ ಕೆನರಾ ಶಿಕ್ಷಣ ಸಂಸ್ಥೆಯ ಹೊಸ ಪ್ರಯತ್ನ ಮಿತ್ರ ಮಂಡಳಿ 2.0 ಮೂಲಕ ಹೊಸ ಸೃಜನಶೀಲ ಸಮಾಜ ನಿರ್ಮಾಣವಾಗಲಿ. ಸಂಸ್ಕಾರಯುತ ಸಮಾಜಕ್ಕೆ ಈ ಹೆಜ್ಜೆ ದೊಡ್ಡ ಕೊಡುಗೆ ನೀಡಲಿ ಎಂದು ಚಂದ್ರಕಲಾ ನಂದಾವರ ಶುಭ ಹಾರೈಸಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ನ ಸಿಎ ಗಿರಿಧರ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ದೀಪ್ತಿ ನಾಯಕ್ ಪುನಶ್ಚೇತನದ ಉದ್ದೇಶದ ಬಗ್ಗೆ ಮಾತನಾಡಿದರು.
ಮಿತ್ರ ಮಂಡಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದ ಎಂ.ಎನ್. ಕಾಮತ್ ಕನ್ನಡಕ್ಕೆ ಅನುವಾದಿಸಿದ, ರವೀಂದ್ರನಾಥ ಟಾಗೋರ್ ರಚನೆಯ ಗೀತಾಂಜಲಿಯ ಹಾಡು ಕೆನರಾ ಪ್ರಾರ್ಥನಾ ಗೀತೆ ಎಲ್ಲಿ ಮನಕಳುಕಿರದೋ-ವನ್ನು ಮಕ್ಕಳು ಹಾಡಿದರು.
ಕೆನರಾ ಕಲ್ಚರಲ್ ಅಕಾಡಮಿಯ ಸಂಚಾಲಕ ಮಂಗಲ್ಪಾಡಿ ನರೇಶ್ ಶೆಣೈ, ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ್ ಮಲ್ಯ, ಮಿತ್ರ ಮಂಡಳಿಯ ರೂಪುರೇಶೆ ಪ್ರಮುಖರುಗಳಾದ ಗುರು ಬಂಟ್ವಾಳಕಾರ್, ವಿಕ್ರಮ್ ರಾಜ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.