‘ಕೇಂದ್ರ ಸರಕಾರ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದೆ’: ಯು.ಟಿ. ಖಾದರ್
ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನ್ಯಾಯವೇ ಕಾನೂನು ಆದರೆ ಪ್ರತಿಭಟನೆ ಕರ್ತವ್ಯ ಆಗುತ್ತದೆ ಎಂದವರು ಹೇಳಿದರು.
ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ, ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವಿಗೆ ಧ್ವನಿಯಾಗಿ ಪ್ರತಿಭಟನೆ ನಡೆಯುತ್ತಿದೆ. ಅತ್ತ ಸಂಸತ್ತಿನಲ್ಲಿಯೂ ಚರ್ಚೆಗೆ ಅವಕಾಶ ನೀಡದೆ, ಇತ್ತ ಪ್ರತಿಭಟನೆ ಮಾಡುವವರ ಮಾಡುವವರ ಮೇಲೆ ಲಾಠಿ ಪ್ರಯೋಗ ಮಾಡುತ್ತಿರುವುದು ಖಂಡನೀಯ. ವಿದ್ಯಾರ್ಥಿಗಳ ಬೇಡಿಕೆಯನ್ನು ಆರಂಭದಲ್ಲಿಯೇ ಕೇಂದ್ರ ಸರಕಾರ ಮನ್ನಿಸಿದ್ದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿರಲಿಲ್ಲ. ಕೇಂದ್ರ ಸರಕಾರ ಪ್ರತಿಭಟನಾ ನಿರತರದ ಬೇಡಿಕೆಯನ್ನು ತುರ್ತಾಗಿ ಸ್ಪಂದಿಸಬೇಕು. ಪ್ರಧಾನಿ ಮೌನ ಮುರಿಯಬೇಕು. ಕೇಂದ್ರದಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿ ಇದ್ದಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುತ್ತಿತ್ತು ಎಂಬುದನ್ನು ಎದೆತಟ್ಟಿ ಹೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭ ವಿದ್ಯಾರ್ಥಿಗಳ ಮೇಲೆ ಪೊಲೀಸರ ಜತೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಇವತ್ತು ಯಾವುದನ್ನೂ ಚರ್ಚೆ ಮಾಡುವ ಹಾಗಿಲ್ಲ. ಗಾಂಧೀಜಿ ಕನಸಿನ ಭಾರತದಲ್ಲಿ ವಿರುದ್ಧವಾದ ಆಡಳಿತವಿದೆ. ಕೆಲವರು ಕೇಂದ್ರ ಸಚಿವರು ಯಾಕೆ ರಾಜೀನಾಮೆ ನೀಡಬೇಕು ಎಂದು ಕೇಳುತ್ತಿದ್ದಾರೆ. ಹಾಗಾದರೆ ಈ ಹಿಂದೆ ಕೆ.ಜೆ. ಜಾರ್ಜ್, ನಾಗೇಂದ್ರ ಅವರ ರಾಜೀನಾಮೆ ಕೇಳಿದ್ದು ಯಾಕೆ, ಬಿಜೆಪಿಗೆ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಯುವ ಜನಾಂಗ ತಕ್ಕ ಉತ್ತರ ನೀಡಲಿದೆ. ಇದು ಯುವಕರ ಮೇಲಿನ ಹಲ್ಲೆ ಮಾತ್ರವಲ್ಲ, ಭವಿಷ್ಯ ಭಾರತದ ಮೇಲೆ ಮಾಡಿದ ಘೋರ ಕೃತ್ಯ ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷ ಹಾಗೂ ಮುಖಂಡ ರಾಹುಲ್ ಗಾಂಧಿಯವರು ಗಂಭೀರವಾಗಿ ಪರಿಗಣಿಸಿದ್ದಾರೆ. ತಾಲೂಕು, ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಿದೆ ಎಂದವರು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸಕಾರಾತ್ಮಕವಾಗಿ ಕ್ರಮ ವಹಿಸುತ್ತಿತ್ತು. ವಿದ್ಯಾರ್ಥಿಗಳ ಮೇಲೆ ಲಾಠಿ ಚಾಜ್ರ್ ಮಾಡಿ ಹಲ್ಲೆ ನಡೆಸಲು ಅವಕಾಶ ನೀಡುತ್ತಿರಲಿಲ್ಲ. ಧಾರವಾಡದಲ್ಲಿ ನಿರುದ್ಯೋಗದ ಸಮಸ್ಯೆ ಮುಂದಿಟ್ಟು ವಿದ್ಯಾರ್ಥಿಗಳ ಹೋರಾಟವನ್ನು ಸಮರ್ಥವಾಗಿ ನಿಭಾಯಿಸಲಾಗಿತ್ತು. ಈ ಪ್ರಕರಣದಲ್ಲಿಯೂ ಕಾಂಗ್ರೆಸ್ ಸಂಸತ್ತಿನಲ್ಲಿ ಚರ್ಚೆಗೆ ಮುಂದಾಗಿತ್ತು. ಆದರೆ ಅಲ್ಲಿ ಅವಕಾಶ ಸಿಗದಿದ್ದ ಸಂದರ್ಭ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಯೋಗವಾಗಿದ್ದನ್ನು ಕಂಡು ರಾಹುಲ್ ಪ್ರತಿಭಟನೆಗೆ ಮುಂದಾದರು. ಪ್ರಧಾನಿಯವರು ಕೂಡಾ ಸೂಕ್ತ ಸಮಯದಲ್ಲಿ ಇದಕ್ಕೆ ಸ್ಪಂದಿಸಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿರಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನೀಟ್ ಪರೀಕ್ಷೆ ನಡೆಸುವ ಎನ್ಟಿಎ ಚೇರ್ಮೆನ್ ರಾಜೀನಾಮೆ ಅಥವಾ ಅವರ ಮೇಲೆ ಕ್ರಮಕ್ಕೆ ಯಾರೂ ಧ್ವನಿ ಎತ್ತುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ, ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಆಗಲಿ. ಈ ವ್ಯವಸ್ಥೆಯ ಮೇಲುಸ್ತುವಾರಿ ಯಾರು ಅವರು ಇದರ ನೈತಿಕ ಹೊಣೆಯನ್ನು ಹೊರಬೇಕು ಎಂದು ಹೇಳಿದರು.
ಕಾಂಗ್ರೆಸ್ ಕಾಕ್ರೋಚ್ ಪಾರ್ಟಿಗೆ ಹತ್ತಿರವಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಕ್ರೋಜ್ ಜತೆ ಯಾವತ್ತೂ ಟೈ ಅಪ್ ಇದೆ. ಆದರೆ ಪಾರ್ಟಿ ಜತೆಗಿಲ್ಲಎಂದು ಪ್ರತಿಕ್ರಿಯಿಸಿದರು.
ದ.ಕ. ಶಾಂತ..
‘ಕೋಮು ಗಲಭೆಗಳಿಂದ ನಲುಗಿದ್ದ ದ.ಕ. ಜಿಲ್ಲೆ ಕಳೆದ ಒಂದೂವರೆ ವರ್ಷದಿಂದ ಶಾಂತವಾಗಿದೆ. ಪೊಲೀಸ್ ಆಯುಕ್ತರು ಹಾಗೂ ಎಸ್ಪಿಯವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಇಲ್ಲಿನ ಕೊಲೆ ಘಟನೆಗಳನ್ನು ವಿವರಿಸಿ ಹಿಂದಿನ ಅಧಿಕಾರಗಳ ಖಡಕ್ ಶೈಲಿಯನ್ನು ಸಭೆಯಲ್ಲಿ ಪ್ರಸ್ತಾವಿಸಿ, ಕೊಲೆ, ಗಲಭೆಗೆ ಪ್ರಯತ್ನಿಸುವವರಿಗೆ ತಮಗೆ ಉಳಿಗಾಲವಿಲ್ಲ ಎಂಬ ಸಂದೇಶ ಬಂದರೆ ಅಂತಹ ಘಟನೆಗಳು ಮರುಕಳಿಸದು ಎಂಬುದಾಗಿ ಸಭೆಯಲ್ಲಿ ಸಲಹೆಯನ್ನಷ್ಟೇ ನೀಡಿದ್ದೆ. ಬೇರೇನೂ ಉದ್ದೇಶವಿರಲಿಲ್ಲ’ ಎಂದವರು, ಇತ್ತೀಚೆಗೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭ ರೌಡಿಗಳಿಗೆ ಗುಂಡು ಹೊಡೆಯಿರಿ ಎಂಬ ಅರ್ಥದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವ ವೀಡಿಯೋ ವೈರಲ್ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
ಶಾಸಕ ಡಾ. ಮಂತರ್ ಗೌಡ, ಮುಖಂಡರಾದ ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ರಮೇಶ್ ಶೆಟ್ಟಿ, ನವಾಝ್, ಸುಹೇಲ್ ಕಂದಕ್, ಶೇಖರ್ ಮೊದಲಾದವರು ಉಪಸ್ಥಿತರಿದ್ದರು.