ಗುರುವಂದನಾ ಕಾರ್ಯಕ್ರಮ ಹಾಗೂ ಸೇವಾ ನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಗೌರವಾರ್ಪಣೆ
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಬೂದಿಹಾಳ ಅವರು ಉದ್ಘಾಟಿಸಿ, ಗುರು ಶಿಷ್ಯ ಪರಂಪರೆ ಅತ್ಯಂತ ಮಹತ್ವದ್ದಾಗಿದ್ದು, ಅದು ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ನಾಡಿನ ಪ್ರಖ್ಯಾತ ಚಿಂತಕರು ಹಾಗೂ ವಾಗ್ಮಿಗಳು ಆಗಿರುವ ಡಾ. ರವೀಂದ್ರ ಅವರು ಭಾರತೀಯ ಜ್ಞಾನ ಪರಂಪರೆ ಕುರಿತು ಮಾತನಾಡಿ, ಇಂದಿನ ಯುವ ಸಮುದಾಯಕ್ಕೆ ಭಾರತಿಯ ಜ್ಞಾನ ಪರಂಪರೆಯ ಮಹತ್ವವನ್ನು ತಿಳಿಸುವ ಜವಾಬ್ದಾರಿ ಇಂದಿನ ಶಿಕ್ಷಕರಲ್ಲಿದೆ. ಆಧುನಿಕ ಶಿಕ್ಷಣ ಪದ್ಧತಿಯ ಮಧ್ಯೆ ಭಾರತೀಯ ಶಿಕ್ಷಣ ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಬೇಕು, ಆಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಜನಾಂಗಕ್ಕೆ ನಾವು ತಲುಪಿಸುವುದಕ್ಕೆ ಸಾಧ್ಯ ಎಂದರು.
ನಮ್ಮ ಬದುಕಿಗೆ ಬೆಳಕು ತೋರುವವನು ಗುರು. ಶಿಕ್ಷಣದ ಮೂಲಕ ಬದುಕಿನ ನಿಜವಾದ ದರ್ಶನವನ್ನು ಮಾಡುತ್ತಾನೆ. ನಿಜವಾದ ಶಿಕ್ಷಣ ಎಂದರೆ ಒಬ್ಬ ವ್ಯಕ್ತಿಯ ಮನಸ್ಸಿನ ಒಳಗಿನ ಬೆಳಕನ್ನು ಹೊರಜಗತ್ತಿಗೆ ಪರಿಚಯಿಸುವುದೇ ಅಗಿದೆ. ಅಂತಹ ಶಿಕ್ಷಣವನ್ನು ಕಲಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮಾಡುವಾತನೆ ಗುರು ಎಂದು ಹೇಳಿದರು.
ಕೆಆರ್ಎಂಎಸ್ಎಸ್ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಮಂಗಳೂರು ಇಲ್ಲಿನ ಪ್ರಾಂಶುಪಾಲ ಡಾ. ಭಾನುಪ್ರಕಾಶ್ ಬಿ.ಇ. ಉಪಸ್ಥಿತರಿದ್ದು, ಶಿಕ್ಷಕ ವೃತ್ತಿಯ ಶ್ರೇಷ್ಠತೆಯ ಕುರಿತು ಮಾತಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧ್ಯಾಪಕರುಗಳಾದ ಕೆ.ಎಸ್. ಹೆಗ್ಡೆ ಕಾಲೇಜಿನ ದಿನೇಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ವಿಶಾಲಾಕ್ಷಿ, ವಿಜಯಾ ಕಾಲೇಜಿನ ವೆಂಕಟೇಶ್ ಭಟ್, ಎಸ್ಡಿಎಂ ಕಾಲೇಜಿನ ಪ್ರೊ. ಅರುಣಾ ಪಿ. ಕಾಮತ್, ಬೆಳಂದೂರು ಕಾಲೇಜಿನ ಶಂಕರ್ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷೆ ಮೇಜರ್ ಡಾ. ಸುಧಾ ಯು. ಸ್ವಾಗತಿಸಿದರು. ಶ್ರುತಿ ಎನ್. ವಂದಿಸಿದರು. ಗೀತಾ ಜೈನ್, ಕಾಜಲ್ ಶ್ರುತಿ ಎನ್. ಕಾರ್ಯಕ್ರಮವನ್ನು ಸಂಯೋಜಿಸಿ, ಕಾಜಲ್ ಕಾರ್ಯಕ್ರಮ ನಿರೂಪಿಸಿದರು.