ಆಯುರ್ ಗ್ರಾಮ ಅಭಿಯಾನ: ಇರಾದಲ್ಲಿ ಉಚಿತ ಆಯುರ್ವೇದ ಆರೋಗ್ಯ ಶಿಬಿರ
Sunday, July 26, 2026
ಮುಡಿಪು: ಇರಾ ಗ್ರಾ.ಪಂ. ವ್ಯಾಪ್ತಿಯ ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ ಇದರ ಸಭಾಂಗಣದಲ್ಲಿ ಆಯುರ್ ಗ್ರಾಮ ಅಭಿಯಾನದಡಿ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.
ಶಾರದಾ ಆಯುರ್ವೇದ ಕಾಲೇಜು ಆಸ್ಪತ್ರೆ, ಜನ ಶಿಕ್ಷಣ ಟ್ರಸ್ಟ್, ಇರಾ ಶಾಲಾಭಿವೃದ್ಧಿ ಸಮಿತಿ, ಮಲೆಯಾಳಿ ಬಿಲ್ಲವ ಸೇವಾ ಸಂಘದ ಸಹಯೋಗದಲ್ಲಿ ನಡೆದ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದ ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಶಾರದಾ ಆಯುರ್ವೇದ ಕಾಲೇಜು ಆಸ್ಪತ್ರೆ ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಮುಡಿಪು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಸಮುದಾಯ ಕೇಂದ್ರಿತ ಉಚಿತ ಆರೋಗ್ಯ ಶಿಬಿರಗಳಿಂದ ಸಮುದಾಯದ ಆರೋಗ್ಯ ರಕ್ಷಣೆಯೊಂದಿಗೆ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಸುಲಭದಲ್ಲಿ ಮನೆ ಬಾಗಿಲಲ್ಲೇ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಡಾ. ಗಣೇಶ್ ಅವರು ಆರೋಗ್ಯಕರ ಜೀವನ ವಿಧಾನಗಳ ಬಗ್ಗೆ ಮಾಹಿತಿ ನೀಡಿ, ಪರಿಸರ ಮಾಲಿನ್ಯ ಮತ್ತು ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸಿದರು. ವಿಷಕಾರಿ ಪ್ಲಾಸ್ಟಿಕ್ ಮತ್ತು ಸ್ಯಾನಿಟರಿ ತ್ಯಾಜ್ಯಗಳಿಂದ ಸೃಷ್ಟಿ ಯಾಗಿರುವ ಮಹಾ ಮಾಲಿನ್ಯವನ್ನು ತಡೆದರೆ ಮಾರಕ ರೋಗ ಮುಕ್ತ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವೆಂದು ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಗ್ರಾಮ ಆರೋಗ್ಯ ಅಭಿಯಾನದಲ್ಲಿ ಶಾಲಾಭಿವೃದ್ಧಿ ಸಮಿತಿ ಸಂಪೂರ್ಣ ಸಾಥ್ ನೀಡಿದೆ ಎಂದು ಅಧ್ಯಕ್ಷ ಇಸ್ಮಾಯಿಲ್ ತಿಳಿಸಿದರು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರು ಆರೋಗ್ಯ ಶಿಕ್ಷಣ ಸಂವಾದ ನಿರ್ವಹಿಸಿದರು. ಡಾ. ಗಣೇಶ್, ಡಾ.ಪ್ರವೀಣ್ ನೇತೃತ್ವದ ವೈದ್ಯಕೀಯ ತಂಡದವರು 75 ಜನರ ವೈದ್ಯಕೀಯ ತಪಾಸಣೆ ನಡೆಸಿ ಔಷಧಿ ಚಿಕಿತ್ಸೆ ನೀಡಿದರು.
ಮಾಜಿ ಪಂ. ಸದಸ್ಯ ಮಹಮ್ಮದ್, ಮಲೆಯಾಳಿ ಬಿಲ್ಲವ ಸಂಘದ ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ ಗಣೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಅಬ್ದುಲ್ ರಹಿಮಾನ್, ಲತೀಶ್, ಸುರೇಶ್, ಹಂಸ, ಹಾಜಿರಮ್ಮ, ಫಾತಿಮತ್ ಝೊಹರಾ, ಸುಜಾತಾ ಎಸ್.ಐ.ವಿ. ಸಂಯೋಜಕ ಶಶಿಕಾಂತ್, ಶಿಕ್ಷಕಿ ರೆನ್ನಿ ಡಿಸೋಜ ಶಿಬಿರದ ಸಂಯೋಜನೆಗೆ ಸಹಕರಿಸಿದರು.


