ಭಜನಾಮಂದಿರದ ಕಾಣಿಕೆ ಡಬ್ಬಿ ಕಳವಿಗೆ ಯತ್ನಿಸಿದಾತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
Wednesday, August 19, 2026
ಬಂಟ್ವಾಳ: ಬ್ರಹ್ಮರಕೂಟ್ಟು ಶ್ರೀ ಮೂಕಾಂಬಿಕಾ ರಾಮ ಭಜನಾ ಮಂದಿರದ ಕಾಣಿಕೆ ಡಬ್ಬಿಯಿಂದ ಹಣ ಕದಿಯುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಂಭವಿಸಿದೆ.
ರಾಮ ಭಜನಾ ಮಂದಿರದ ಆಡಳಿತ ಸಮಿತಿ ಸದಸ್ಯ ದಿನಕರ ಎಂಬವರು ಆ.18 ರಂದು ಬೆಳಗ್ಗೆ 11.30-11.45ರ ವೇಳೆಗೆ ಸೀಯಾಳ ಇಡಲೆಂದು ತೆರಳಿದಾಗ ಅಪರಿಚಿತ ವ್ಯಕ್ತಿಯೋರ್ವ ಕಾಣಿಕೆ ಡಬ್ಬಿಯನ್ನು ಅಡ್ಡ ಹಾಕಿ ಅದರಲ್ಲಿದ್ದ ಹಣ ಕದಿಯುತ್ತಿದ್ದ. ಇದನ್ನು ಗಮನಿಸಿದ ಅವರು ಪರಿಚಯಸ್ಥ ರಿಕ್ಷಾ ಚಾಲಕರಾದ ತಾರೇಶ್, ರೂಪೇಶ್ ಹಾಗೂ ರಂಜನ್ ಅವರಿಗೆ ಮಾಹಿತಿ ನೀಡಿ ಅವರೊಂದಿಗೆ ಮಂದಿರಕ್ಕೆ ಹೋಗಿ ಅಪರಿಚಿತ ಕಳ್ಳನನ್ನು ಹಿಡಿದಿಟ್ಟಿದ್ದಾರೆ.
ಕಳ್ಳ ಮಂದಿರದಿಂದ ಕದ್ದ ಹಣ ಸುಮಾರು 700 ರೂಪಾಯಿ ಎಂದು ಅಂದಾಜಿಸಲಾಗಿದೆ. ಆತನ ಚೀಲದಲ್ಲಿ ಮಂದಿರದ ಹಣವಲ್ಲದೆ ಬೇರೆ ಯಾವುದೋ ದೇವಸ್ಥಾನದಿಂದ ಕಳವುಗೈದ ಕಳಶದ ತಂಬಿಗೆ ಹಾಗೂ ಹಿತ್ತಾಳೆಯ ದೇವರ ಮೂರ್ತಿ ಪತ್ತೆಯಾಗಿದೆ.ಈತತನ್ನ ಹೆಸರನ್ನು ಸಾಜಿದ್ ಎಂದು ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಈ ಬಗ್ಗೆ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಕೆ. ಶಶಿಧರ ಅವರು ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.