ಮೋದಿ ಗುಂಡು ಹಾರಿಸಿದರೂ ವಂದೇ ಮಾತರಂ ಪೂರ್ಣವಾಗಿ ಹಾಡುವುದಿಲ್ಲ: ಉನ್ನಿತಾನ್
ಈ ಜೀವಮಾನದಲ್ಲೂ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡುವುದಿಲ್ಲ. ಇದುವರೆಗೆ ಯಾವ ರೀತಿಯಲ್ಲಿ ಹಾಡಲಾಗುತ್ತಿದೆಯೋ ಅದೇ ರೀತಿಯಲ್ಲಿ ಮುಂದೆಯೂ ಹಾಡಲಾಗುವುದು. ಅದಕ್ಕಿಂತ ಹೆಚ್ಚಿನದನ್ನು ಹಾಡುವುದಿಲ್ಲ ಎಂದು ಉನ್ನಿತಾನ್ ಸ್ಪಷ್ಟಪಡಿಸಿದ್ದಾರೆ.
ಕೇರಳದ ಮುಖ್ಯ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹಾ ಅವರು ಆಗಸ್ಟ್ 6ರಂದು ಹೊರಡಿಸಿರುವ ಸೂಚನೆಯ ಹಿನ್ನೆಲೆಯಲ್ಲಿ ಉನ್ನಿತಾನ್ ಈ ಹೇಳಿಕೆ ನೀಡಿದ್ದಾರೆ. ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಆಗಸ್ಟ್ 9ರಿಂದ 17ರವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜಾರೋಹಣದ ಜತೆಗೆ ‘ವಂದೇ ಮಾತರಂ’ ಅನ್ನು ಸಾಮೂಹಿಕವಾಗಿ ಹಾಡುವಂತೆ ಸೂಚಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಉನ್ನಿತಾನ್, ರಾಜ್ಯಪಾಲರ ಕಚೇರಿಗಳು ಕೆಳಮಟ್ಟದ ರಾಜಕೀಯದ ಕೇಂದ್ರಗಳಾಗಿವೆ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.
ಏತನ್ಮಧ್ಯೆ, ಕೇರಳದ ಪ್ರತಿಪಕ್ಷ ಸಿಪಿಐ(ಎಂ) ಕೂಡ ‘ವಂದೇ ಮಾತರಂ’ನ ಪೂರ್ಣ ಆವೃತ್ತಿಯನ್ನು ಹಾಡುವಂತೆ ನೀಡಿರುವ ಸೂಚನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.