ಆ.24-28ರವರೆಗೆ ಕದ್ರಿ ಮಠದಲ್ಲಿ ಶ್ರೀಮತ್ ಲಕ್ಷ್ಮೀನಾರಾಯಣ ಮಹಾಯಾಗ
ಮಂಗಳೂರು: ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಆ. 24ರಿಂದ 28ರ ವರೆಗೆ ಲೋಕಕಲ್ಯಾಣಾರ್ಥವಾಗಿ ಶ್ರೀಮತ್ ಲಕ್ಷ್ಮೀನಾರಾಯಣ ಮಹಾಯಾಗವನ್ನು ಆಯೋಜಿಸಲಾಗಿದೆ.
ಜಗದಾಚಾರ್ಯ ಸ್ವಾಮಿ ಅಖಿಲೇಶ್ಜೀ ಮಹಾರಾಜ್ ಸೇವಾ ಸಂಸ್ಥಾನ ಮತ್ತು ಸ್ಯಾಫ್ರನ್ ಫ್ರಂಟ್ ಸಹಯೋಗದೊಂದಿಗೆ ಈ ಯಾಗ ಸಂಪನ್ನಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಮಹಾಯಾಗವು ಆಚಾರ್ಯ ಶ್ರೀ ಲವ್ಕುಶ್ ಮಿಶ್ರಾಜೀ, ವಿಂದ್ಯಾಚಲ್, ವಾರಣಾಸಿ, ಉತ್ತರ ಪ್ರದೇಶ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
24ರಂದು ಕಳಶಯಾತ್ರೆ:
ಆ. 24ರಂದು ಬೆಳಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಕದ್ರಿ ಮಠದವರೆಗೆ ಕಳಶಯಾತ್ರೆ ನಡೆಯಲಿದೆ. ಬಳಿಕ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ಜರಗಲಿವೆ. ೨೮ರಂದು ಪೂರ್ಣಾಹುತಿ ನೆರವೇರಲಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕಾರ್ಯಾಧ್ಯಕ್ಷ ರಾಘವೇಂದ್ರ ರಾವ್, ಪ್ರಧಾನ ಸಂಚಾಲಕ ರಾಜೇಶ್ ಪವಿತ್ರನ್, ಸಂಘಟನಾ ಕಾರ್ಯದರ್ಶಿ ಎಲ್.ಕೆ. ಸುವರ್ಣ ಹಾಗೂ ಪ್ರಮುಖರಾದ ಜನಾರ್ದನ ಮತ್ತು ಕಮಲೇಶ ಸುವರ್ಣ ಉಪಸ್ಥಿತರಿದ್ದರು.