ಅಗತ್ಯವಿರುವಲ್ಲಿ ರಸ್ತೆ ಅಗಲೀಕರಣ: 60 ವಾರ್ಡ್ಗೂ ಪ್ರತಿದಿನ ನೀರು
ಮಂಗಳೂರು: ಕೆಲವೊಂದು ಪ್ರಮುಖ ರಸ್ತೆಗಳ ಅಗಲೀಕರಣ ಹಾಗೂ ಪುಟ್ಪಾತ್ಗಳ ನಿರ್ಮಾಣಕ್ಕೂ ಆದ್ಯತೆ ನೆಲೆಯಲ್ಲಿ ಕ್ರಮ ವಹಿಸಲಾಗುವುದು. ಸದ್ಯ ಪಾಲಿಕೆಯ 50 ವಾರ್ಡ್ಗಳಿಗೆ ಪ್ರತಿದಿನ ಹಾಗೂ 10 ವಾರ್ಡ್ನಲ್ಲಿ ಎರಡು ದಿನಕೊಮ್ಮೆ ನೀರು ಪೂರೈಕೆ ನಡೆಯುತ್ತಿದೆ. ಪ್ರತಿ ವಾರ್ಡ್ಗಳ ಪ್ರತಿ ಮನೆಗೂ ಪ್ರತಿದಿನ ನೀರು ಸರಬರಾಜು ಮಾಡಬೇಕೆಂಬುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಡಬ್ಲ್ಯುಟಿಪಿ (ವಾಟರ್ ಟ್ರೀಟ್ಮೆಂಟ್ಪ್ಲಾಂಟ್)ನಲ್ಲಿ ಬದಲಾವಣೆ ಮಾಡಿಕೊಂಡು ಹಬ್ಬಗಳ ಬಳಿಕ ಎಲ್ಲಾ ವಾರ್ಡ್ಗಳಿಗೂ ಪ್ರತಿದಿನ ನೀರು ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಮಹಾನಗರ ಪಾಲಿಕೆಯ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಹೇಳಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದದ ವೇಳೆ ಮಾತನಾಟಿದ ಅವರು, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದ್ದು,
ಅದರ ಜತೆಗೆ ಜನ ಜಾಗೃತಿ ಅಭಿಯಾನವನ್ನೂ ನಡೆಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಕೆಲವೊಂದು ಸರಕಾರೇತರ ಸಂಸ್ಥೆಗಳವರು ಸ್ವಯಂ ಪ್ರೇರಿತವಾಗಿ ಈ ಕಾರ್ಯಕ್ಕೆ ಸಹಕಾರ
ನೀಡಲು ಮುಂದಾಗಿದ್ದು,ಅವರ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣದ ಸಂದರ್ಭ ಮರಗಳನ್ನು ನೆಟ್ಟು ಪೋಷಣೆ ಮಾಡುವ ಬಗ್ಗೆಯೂ ಕ್ರಮ ವಹಿಸಲಾಗುವುದು.
ಮಾರುಕಟ್ಟೆ ಸಭೆ..
ಉರ್ವಾ ಮಾರುಕಟ್ಟೆಸೇರಿದಂತೆ ನಗರದ ಹಲವೊಂದು ಮಾರುಕಟ್ಟೆಗಳು ನಿರ್ಮಾಣವಾಗಿ ಹಲವು ಸಮಯಗಳಾದರೂ ಬಳಕೆಯಲ್ಲಿಲ್ಲದಿರುವುದು ಗಮನಕ್ಕೆ ಬಂದಿದೆ. ಮಾರುಕಟ್ಟೆಗಳಿಗೆ ಸಾಕಷ್ಟು ಹಣವನ್ನು ವೆಚ್ಚ ಮಾಡಲಾಗಿದ್ದು, ಅದಕ್ಕಾಗಿ ಸಾಕಷ್ಟುಸಾಲವನ್ನು ಪಡೆಯಲಾಗಿದೆ. ಹಾಗಾಗಿ ಅವುಗಳ ಬಳಕೆ ಬಗ್ಗೆ ಕ್ರಮ ಅಗತ್ಯವಾಗಿದೆ. ಕಂಕನಾಡಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೇಂದ್ರ ಮಾರುಕಟ್ಟೆಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳ ಸ್ಥಿತಿಗತಿಗಳ ಬಗ್ಗೆ ಮುಂದಿನ ವಾರ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಫುಟ್ಪಾತ್ಗಳು ಪಾದಾಚಾರಿಗಳಿಗೆ ಮಾತ್ರವೇ ಸೀಮಿತವಾಗಿರಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಚ್ನ ಆದೇಶದಂತೆ ಕ್ರಮ ವಹಿಸುವ ಜತೆಗೆ ಬೀದಿಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲಾಗುವುದು. ಬೀದಿಬದಿ ವ್ಯಾಪಾರಿಗಳ ಮಾರ್ಗಸೂಚಿಯಂತೆ ಯಾರೆಲ್ಲಾ ಅರ್ಹರು, ರಾಜ್ಯದವರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ನಿಯಮಗಳನ್ನು ಪಾಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.