ಕಳಪೆ ಚಿಕನ್ ಉತ್ಪನ್ನ ಮಾರಾಟ ಆರೋಪ: ಆಹಾರ ಸುರಕ್ಷ ಅಧಿಕಾರಿಗಳ ದಾಳಿ
ನಗರದ ನಿವಾಸಿಯೊಬ್ಬರು ಈ ಔಟ್ಲೆಟ್ನಿಂದ ಚಿಕನ್ ಪೆರಿ ಪೆರಿ ಆರ್ಡರ್ ಮಾಡಿದ್ದು, ಆ ಮಾಂಸ ಕೆಟ್ಟು ಹೋಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಸಚಿವರ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮತ್ತು ಜಿಲ್ಲಾ ಆಹಾರ ಸುರಕ್ಷ ಅಧಿಕಾರಿ ಪ್ರವೀಣ್ ಅವರು ಈ ಆಹಾರ ಮಳಿಗೆಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಮಳಿಗೆಯಲ್ಲಿ ಸಂಗ್ರಹಿಸಲಾಗಿದ್ದ ಚಿಕನ್ ಗುಣಮಟ್ಟ ಉತ್ತಮವಾಗಿಲ್ಲ ಎಂಬುದು ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಂಸದ ಮಾದರಿ ಸಂಗ್ರಹಿಸಿ ಮೈಸೂರಿನ ಆಹಾರ ತಪಾಸಣ ಲ್ಯಾಬೋರೇಟರಿಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪರಿಶೀಲನೆ ವೇಳೆ ಸುಮಾರು 4 ತಿಂಗಳ ಹಿಂದೆ ಪ್ಯಾಕೇಜ್ ಮಾಡಲಾಗಿದ್ದ ಚಿಕನ್ ಪತ್ತೆಯಾಗಿದೆ. ಮಳಿಗೆಯಲ್ಲಿ ಸ್ವತ್ಛತೆ ಇಲ್ಲದ ಕಾರಣ ಸಂಸ್ಥೆಗೆ ನೋಟಿಸ್ ನೀಡಲಾಗಿದ್ದು, ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ. ನಿಯಮಗಳ ಉಲ್ಲಂಘನೆ ದೃಢ ಪಟ್ಟಲ್ಲಿ ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.