ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣಾ ಶಿಬಿರ


ಮಂಗಳೂರು: ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (ಪಿಎಂಐ), ಮಂಗಳೂರು ಘಟಕದ ವತಿಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು ಸಹಯೋಗದಲ್ಲಿ ನಗರದ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಕೈದಿಗಳಿಗಾಗಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಉದ್ಘಾಟಿಸಿದ ಜೈಲು ಅಧೀಕ್ಷಕ ಶರಣಬಸಪ್ಪ ಅವರು, ಜೈಲನ್ನು ಕೇವಲ ಶಿಕ್ಷೆಯ ಸ್ಥಳವಾಗಿ ನೋಡದೆ ‘ತಿದ್ದುಪಡಿ ಕೇಂದ್ರ’ವಾಗಿ ಪರಿಗಣಿಸಬೇಕು. ತಮ್ಮ ತಪ್ಪುಗಳನ್ನು ಅರಿತುಕೊಂಡು ಜೀವನವನ್ನು ಸುಧಾರಿಸಿಕೊಂಡು ಸಮಾಜಕ್ಕೆ ಜವಾಬ್ದಾರಿಯುತ ವ್ಯಕ್ತಿಗಳಾಗಿ ಮರಳಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಪ್ರಿಸನ್ ಮಿನಿಸ್ಟ್ರಿ ಇಂಡಿಯಾ, ಮಂಗಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಫಾ. ಸ್ಟೀಫನ್ ಪೆರೇರಾ, ಔಅಆ ಮಾತನಾಡಿ, ಆರೋಗ್ಯ ತಪಾಸಣೆ, ಕೌಶಲ್ಯಾಭಿವೃದ್ಧಿ ಹಾಗೂ ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲು ಜೈಲು ಅಧಿಕಾರಿಗಳು ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ವೈದ್ಯಕೀಯ ಶಿಬಿರಕ್ಕೆ ಸಹಕರಿಸಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೂ ಅವರು ಧನ್ಯವಾದ ಅರ್ಪಿಸಿದರು.

ಶಿಬಿರದಲ್ಲಿ ಒಟ್ಟು 123 ಮಂದಿ ಕೈದಿಗಳು ಪ್ರಯೋಜನ ಪಡೆದರು. ಇವರಲ್ಲಿ 75 ಮಂದಿಗೆ ಸಾಮಾನ್ಯ ಆರೋಗ್ಯ ತಪಾಸಣೆ, 48 ಮಂದಿಗೆ ಚರ್ಮರೋಗ ತಪಾಸಣೆ, 48 ಮಂದಿಗೆ ಮಲೇರಿಯಾ ರಕ್ತ ಪರೀಕ್ಷೆ ಹಾಗೂ 11 ಮಂದಿಗೆ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ನಡೆಸಲಾಯಿತು. ಫಲಾನುಭವಿಗಳ ಪೈಕಿ 115 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯರು ಇದ್ದರು. ಮಹಿಳಾ ಕೈದಿಗಳಿಗೆ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಎಂಐ ಸಂಯೋಜಕ ಡೊನಾಲ್ಡ್ ಡಿಸೋಜಾ, ಸಿಸ್ಟರ್ ಜ್ಯೋತ್ಸ್ನಾ, ಎಸಿ, ಕಾರ್ಯದರ್ಶಿ, ಪ್ರಿಸನ್ ಮಿನಿಸ್ಟ್ರಿ ಇಂಡಿಯಾದ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article