ಮಂಗಳೂರಿನಲ್ಲಿ ಸ್ವಚ್ಛತೆ ಪರಿಶೀಲನೆ: ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ
ಆಯುಕ್ತರು ಶಿವರಾಮ ಕಾರಂತ ರಸ್ತೆ, ಕೆ.ಎಸ್. ರಾವ್ ರಸ್ತೆ, ಲೇಡಿ ಗೋಶನ್, ಸೆಂಟ್ರಲ್ ಮಾರ್ಕೆಟ್ ಹಾಗೂ ಇತರ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಪರಿಶೀಲನೆಯ ಸಂದರ್ಭದಲ್ಲಿ, ಆರೋಗ್ಯ ವಿಭಾಗದ ಅಧಿಕಾರಿಗಳು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಕುರಿತು ಆಯುಕ್ತರಿಗೆ ಮಾಹಿತಿ ನೀಡಿದರು. ಅಲ್ಲದೆ, ಬೀದಿಗಳನ್ನು ಸ್ವಚ್ಛಗೊಳಿಸುವ ವಿಧಾನ ಹಾಗೂ ಇತರ ಸ್ವಚ್ಛತಾ ಸಂಬಂಧಿತ ಅಂಶಗಳ ಕುರಿತು ಆಯುಕ್ತರು ಸ್ವಚ್ಛತಾ ಕರ್ಮಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಆಯುಕ್ತರು ಎಲ್ಲಾ ವಾಣಿಜ್ಯ ಪ್ರದೇಶಗಳಲ್ಲಿ- ಹೋಟೆಲ್ಗಳು, ಅಂಗಡಿಗಳು ಮತ್ತು ಇತರೆ ಉದ್ದಿಮೆ ಸ್ಥಳಗಳಲ್ಲಿ ಡಸ್ಟ್ಬಿನ್ಗಳನ್ನು ಅಳವಡಿಸುವುದು, ಕಟ್ಟಡ ತ್ಯಾಜ್ಯ ತೆರವುಗೊಳಿಸುವುದು, ಕಾಲುದಾರಿಯ (ಫುಟ್ಪಾತ್) ಮೇಲಿರುವ ತಾತ್ಕಾಲಿಕ ನಿರ್ಮಾಣಗಳನ್ನು ತೆರವುಗೊಳಿಸುವುದು, ಬ್ಲ್ಯಾಕ್ ಸ್ಪಾಟ್ಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮತ್ತು ತ್ಯಾಜ್ಯವನ್ನು ರಸ್ತೆಗಳಲ್ಲಿ ಬಿಸಾಡುವ ಸ್ಟ್ರೀಟ್ ಫುಡ್ ವೆಂಡರ್ಸ್ಗಳಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.