ನೀರ್ಮಾರ್ಗ ನವಚೇತನ ಶಾಲೆಯಲ್ಲಿ ‘ಚೈತನ್ಯ ಸಭಾಂಗಣ’ ಉದ್ಘಾಟನೆ
48 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಭಾಂಗಣಕ್ಕೆ ಬೈಕಂಪಾಡಿಯ ಕಲ್ಬಾವಿ ಕನ್ಸ್ಯೂಮರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಸಂಪೂರ್ಣ ಆರ್ಥಿಕ ನೆರವು ದೊರೆತಿದೆ. 3,250 ಚದರ ಅಡಿ ವಿಸ್ತೀರ್ಣ ಹೊಂದಿರುವ ಸಭಾಂಗಣದಲ್ಲಿ ವೇದಿಕೆ ಹಾಗೂ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಗ್ರೀನ್ರೂಮ್ಗಳಿವೆ. ಪ್ರತಿವರ್ಷ ಸುಮಾರು 600 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಉಪಯೋಗವಾಗಲಿದ್ದು, ಶೈಕ್ಷಣಿಕ, ಪಠ್ಯೇತರ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಆರ್ಟಿಎನ್ ಮೇಜರ್ ಡೋನರ್ ಸತೀಶ್ ಬೋಳಾರ್ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಅನಂತ ಪದ್ಮನಾಭ ಕೆ. ಅವರು ಶಾಲೆಯ ಪರವಾಗಿ ಸೌಲಭ್ಯವನ್ನು ಸ್ವೀಕರಿಸಿದರು.
ರೋಟರಿ ಕ್ಲಬ್ ಆಫ್ ಮಂಗಳೂರು ಅಧ್ಯಕ್ಷ ಡೈಡನ್ ಡಿಸಿಲ್ವಾ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವಿನೋದ್ ಅರಾನ್ಹಾ ಅವರು ಯೋಜನೆಯ ಹಿನ್ನೆಲೆಯನ್ನು ವಿವರಿಸಿದರು. ಪಿಪಿ ಮೇಜರ್ ಡೋನರ್ ಕಲ್ಬಾವಿ ಪ್ರಕಾಶ್ ರಾವ್ ಅವರು ನವಚೇತನ ಶಾಲೆ ಹಾಗೂ ರೋಟರಿ ಕ್ಲಬ್ನೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದರು.
ಕಲ್ಬಾವಿ ಕುಟುಂಬಕ್ಕೆ ಗೌರವ
ಶಾಲೆಯ ಅಭಿವೃದ್ಧಿಗೆ ಸಿಎಸ್ಆರ್ ಮೂಲಕ ನೆರವು ನೀಡಿದ ಕಲ್ಬಾವಿ ಕನ್ಸ್ಯೂಮರ್ ಫುಡ್ಸ್ ಸಂಸ್ಥೆಯ ಕೊಡುಗೆಯನ್ನು ಗುರುತಿಸಿ ಪ್ರಕಾಶ್ ಕಲ್ಬಾವಿ, ಗೌರಿ ಕಲ್ಬಾವಿ ಹಾಗೂ ಅದೀತ್ ಕಲ್ಬಾವಿ ಅವರನ್ನು ಶಾಲಾ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ನಿರ್ಮಾಣ ಸಮಿತಿ ಸದಸ್ಯರು, ಇಂಜಿನಿಯರ್ಗಳು, ಗುತ್ತಿಗೆದಾರರು ಸೇರಿದಂತೆ ವಿವಿಧರನ್ನೂ ಗೌರವಿಸಲಾಯಿತು.
ಇದೇ ವೇಳೆ ಆನ್ಸ್ ಕ್ಲಬ್ ಆಫ್ ಮಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ 80,000 ಮೌಲ್ಯದ ವಿದ್ಯಾರ್ಥಿವೇತನ ವಿತರಿಸಲಾಯಿತು.
ನವಚೇತನ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರಕಾಶ್ ಕಲ್ಬಾವಿ ಶ್ಲಾಘಿಸಿದರು. ಕಳೆದ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಕ್ರಮವಾಗಿ 2ನೇ ಮತ್ತು 9ನೇ ರ್ಯಾಂಕ್ ಪಡೆದಿರುವುದನ್ನು ಅವರು ಉಲ್ಲೇಖಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸ್ಕಂದ ಪ್ರಸಾದ್ (97.28%), ಲಿಖಿತ್ ಎಂ. (96.32%) ಹಾಗೂ ವೈಷ್ಣವಿ ಪಿ.ಎನ್. (96.16%) ಅವರನ್ನು ಸನ್ಮಾನಿಸಲಾಯಿತು.