ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿನಿಂದ ತಾಲಿಬಾನ್ ಸಂಸ್ಕೃತಿ ಇದೆ: ನಳಿನ್ ಕುಮಾರ್ ಕಟೀಲ್
ಅವರು ಇಂದು ಪುತ್ತೂರಿನಲ್ಲಿ ಮಾಧ್ಯಮದವರ ಜೊತೆ ಪುತ್ತೂರಿನ ದರ್ಬೆಯಲ್ಲಿ ನಡೆದ ಗಲಾಟೆ ವಿಚಾರದ ಕುರಿತು ಮಾತನಾಡಿ, ತಾಲಿಬಾನ್ ಸಂಸ್ಕೃತಿಯ ಹೋರಾಟಗಳು ಜಾಸ್ತಿ ಆಗ್ತಾ ಇವೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾದ ಮೇಲೆ ಇಂತಹ ಘಟನೆಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ದೂರಿದರು.
ಈ ಘಟನೆಯ ಬಗ್ಗೆ ಪುತ್ತೂರಿನ ಶಾಸಕರು ಹಾಗೂ ಗೃಹ ಸಚಿವರು ಮೌನ ವಹಿಸಿದ್ದಾರೆ. ಈ ಘಟನೆಯ ಹಿಂದೆ ಯಾವುದೋ ಶಕ್ತಿಗಳು ಇವೆ ಎಂಬ ಸಂಶಯ ಇದೆ. ಅಂಗಡಿಯಲ್ಲಿ ನಡೆದ ಘಟನೆಯ ಬಗ್ಗೆ ಕಾನೂನು ಅಥವಾ ಪೊಲೀಸ್ ಇಲಾಖೆ ಮುಖಾಂತರ ಬಗೆಹರಿಸಬಹುದಿತ್ತು. ಅದು ಬಿಟ್ಟು ಏಕಾಏಕಿ ಅಂಗಡಿಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಹೊರಗಿನಿಂದ ಜನರು ಬಂದು ಗಲಭೆ ಎಬ್ಬಿಸಿದ್ದಾರೆ. ಆದರೂ ಅವರ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಗೆ ಯಾರಾದ್ರೂ ಒತ್ತಡ ಹೇರಿದ್ದಾರಾ ಎಂದು ಪ್ರಶ್ನಿಸಿದರು.
ಯಾರು ಹಲ್ಲೆಗೊಳಗಾಗಿದ್ದಾರೆ ಅವರ ಮೇಲೆ 307 ಕೇಸ್ ಹಾಕಿದ್ದಾರೆ. ಹಲ್ಲೆ ಮಾಡಿದವರ ಮೇಲೆ 307 ಕೇಸ್ ಹಾಕದೆ, ಹಲ್ಲೆಗೊಳಗಾದವರ ಮೇಲೆ ಕೇಸ್ ಹಾಕಿರೋದು ಹಾಸ್ಯಾಸ್ಪದ ಎಂದ ಅವರು ಹಲ್ಲೆ ಮಾಡಿದವರ ಮೇಲೆ ಯಾವುದೇ ಕೇಸ್ ಯಾಕೆ ಹಾಕಿಲ್ಲ. ಇದು ಯಾವ ರೀತಿಯ ಕಾನೂನು? ಇದು ಕೇವಲ ಒಂದು ಮತ ಹಾಗೂ ಧರ್ಮದ ಮೇಲೆ ಕೇಸ್ ಹಾಕುವಂತ ಕೆಲಸ ಆಗಿದೆ. ಇದಕ್ಕೆ ಯಾರ ಒತ್ತಡ ಇದೆ ಎಂಬುದು ಸ್ಪಷ್ಟ ಆಗಬೇಕು ಎಂದು ಆಗ್ರಹಿಸಿದರು.
ನೀವೇನೂ ತಾಲಿಬಾನ್ ಸಂಸ್ಕೃತಿಯನ್ನು ವಿಸ್ತಾರ ಮಾಡಲು ಹೊರಟಿದ್ದೀರಾ? ಗೃಹ ಸಚಿವರು ಯಾಕೆ ಘಟನೆ ಬಗ್ಗೆ ಮಾತಾಡ್ತಿಲ್ಲ. ಸರಿ, ತಪ್ಪು ಹೇಳಿಕೆಯನ್ನು ಕೊಡಿ, ಗೃಹಸಚಿವರಿಗೆ ಆರ್ಎಸ್ಎಸ್ ಬಗ್ಗೆ ಮಾತಾಡುವ ದಮ್ಮು ಇದೆ. ಆದರೆ ಈ ಮತೀಯವಾದ, ತಾಲಿಬಾನ್ ಸಂಸ್ಕೃತಿ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದು ದೇಶದಲ್ಲೇ ಮೊದಲ ಬಾರಿಗೆ ಇಂತಹ ಕಾನೂನು ಜಾರಿಯಾದಂತಿದೆ. ಎಸ್ಪಿಯವರು ಜಿಲ್ಲೆಯಲ್ಲಿ ಏನು ಮಾಡುತ್ತಿದ್ದಾರೆ? ಈ ಕೂಡಲೇ ಹಲ್ಲೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಮುಂದೆ ಆಗುವ ಎಲ್ಲಾ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದರು.