ಶಾಂತಿ-ನೆಮ್ಮದಿಗೆ ಭಂಗ: ಪ್ರಕರಣ ದಾಖಲು
ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಶಾಂತಿ-ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದ ಮೇರೆಗೆ ಏಳು ಮಂದಿ ಹಾಗೂ ಇತರರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಕಬಕ ನಿವಾಸಿ ಟೆಂಪೋ ಚಾಲಕ ಶ್ರೀಧರ (38), ಮಂಗಳೂರು ಕಪಿತಾನಿಯೋ ನಿವಾಸಿ ಸಂತೋಷ್ ಕುಮಾರ್ ಕೆ. (46), ಬೆಂಗಳೂರು ಗುರುಪ್ಪನಪಾಳ್ಯ ನಿವಾಸಿ ಅಜ್ಮೀನ್ ಖಾನ್, ಬೆಂಗಳೂರು ಜೆ.ಪಿ.ನಗರ ಶೇಖ್ ಫಾಹಾದ್ ಪಾಶ (29), ಬೆಂಗಳೂರು ಜಯನಗರ ಸೈಯದ್ ಜೇಶನ್ ಅಹ್ಮದ್ (24), ಬೆಂಗಳೂರು ನೆಲಸಂದ್ರ ನಿವಾಸಿಗಳಾದ ಇಬ್ರಾಹಿಂ ಶರೀಫ್ (24), ಹಾಗೂ ಜೋಯ ತಸ್ಕಿನ್ (20) ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ
ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಗಲಾಟೆ ನಡೆಸುತ್ತಿದ್ದವರನ್ನು ಚದುರಿಸಿ ವಿಚಾರಣೆ ನಡೆಸಲಾಯಿತು.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.