ಆಹಾರದ ವಿಚಾರದಲ್ಲಿ ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೆ ಕ್ರಮ, ಜನರ ಆರೋಗ್ಯವೇ ಮುಖ್ಯ: ಯು.ಟಿ. ಖಾದರ್
ಪಿಜಿ, ಹಾಸ್ಟೆಲ್ಗಳ ಆಹಾರ ನೈರ್ಮಲ್ಯಕ್ಕೂ ಕಟ್ಟುನಿಟ್ಟಿನ ಸೂಚನೆ!
ಕೆಎಫ್ಸಿ ಮಳಿಗೆಯಲ್ಲಿ ಆಹಾರ ಅಸುರಕ್ಷತೆ ಬಗ್ಗೆ ಗಮನಕ್ಕೆ ಬಂದ ತಕ್ಷಣವೇ ಆಯುಕ್ತರೊಂದಿಗೆ ಚರ್ಚಿಸಿ ಮಳಿಗೆಯನ್ನು ಬಂದ್ ಮಾಡಿಸಿ ಸೀಲ್ ಮಾಡಿಸಿದ್ದೇವೆ. ಇಷ್ಟೊಂದು ಕಠಿಣ ಜಾಗೃತಿ ಮತ್ತು ತಪಾಸಣೆಗಳ ನಡುವೆಯೂ ಮಂಗಳೂರಿನಂತಹ ನಗರದಲ್ಲಿ ಇಂತಹ ಬೇಜವಾಬ್ದಾರಿ ಕಂಡುಬಂದಿರುವುದು ಆಘಾತಕಾರಿ ಎಂದರು.
ಇದೇ ವೇಳೆ ರಾಜ್ಯಾದ್ಯಂತ ಆಹಾರ ಸುರಕ್ಷತಾ ತಪಾಸಣೆ ತೀವ್ರಗೊಳಿಸಿರುವುದಾಗಿ ತಿಳಿಸಿದ ಸಚಿವರು, ಕೇವಲ ಹೋಟೆಲ್ಗಳಷ್ಟೇ ಅಲ್ಲದೆ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಂಗುವ ಪಿಜಿ, ಹಾಸ್ಟೆಲ್ ಹಾಗೂ ಕ್ಯಾಟರಿಂಗ್ ಕೇಂದ್ರಗಳ ಮೇಲೂ ನಿಗಾ ಇಡಲಾಗುತ್ತದೆ. ಮನೆ ಬಿಟ್ಟು ಬಂದಿರುವ ಯುವಜನರಿಗೆ ಸ್ವಂತ ಮಕ್ಕಳಂತೆ ಭಾವಿಸಿ ಶುದ್ಧ, ಪೌಷ್ಟಿಕ ಆಹಾರ ನೀಡಬೇಕು. ಕಳಪೆ ಊಟ ನೀಡುವ ಪಿಜಿಗಳನ್ನು ಮುಚ್ಚಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ವೈರಸ್ ಹರಡುವುದನ್ನು ತಡೆಯಲು ಹೋಟೆಲ್ಗಳು ಮತ್ತು ಕ್ಯಾಂಟೀನ್ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿ ಕುಡಿಯುವ ನೀರನ್ನೇ ಒದಗಿಸಬೇಕು. ಆಹಾರ ಸುರಕ್ಷತಾ ಇಲಾಖೆಯ ಸಿಬ್ಬಂದಿ ಕೊರತೆಯನ್ನು ನೀಗಿಸುವುದರ ಜೊತೆಗೆ, ಸುಪ್ರೀಂ ಕೋರ್ಟ್ ಕೂಡ ಪ್ರಶ್ನಿಸಲಾಗದಂತಹ ಅತ್ಯಾಧುನಿಕ 'ಹೈ ಸ್ಟ್ಯಾಂಡರ್ಡ್ ಫುಡ್ ಟೆಸ್ಟಿಂಗ್ ಲ್ಯಾಬ್' ಅನ್ನು ರಾಜ್ಯದಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದು ತಿಳಿಸಿದರು.