ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ನಮ್ಮ ಕುಡ್ಲ’ ಗೌರವ
ಜಿಲ್ಲೆಯ ಪ್ರಥಮ ತುಳು ವಾರ್ತಾ ವಾಹಿನಿಯಾದ ‘ನಮ್ಮ ಕುಡ್ಲ’ ವತಿಯಿಂದ ಇತ್ತೀಚೆಗೆ ‘ನಮ್ಮ ಕುಡ್ಲ ಕಂಬಳ ಪ್ರಶಸ್ತಿ-2026’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಬಳದ ಪ್ರೇಮಿ ಹಾಗೂ ಪ್ರೋತ್ಸಾಹಕರಾಗಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.
ಕರಾವಳಿ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಕಂಬಳ ಸೇರಿದಂತೆ ತುಳುನಾಡಿನ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಂಬಳ ಪ್ರೋತ್ಸಾಹವನ್ನು ಗುರುತಿಸಿ ‘ನಮ್ಮ ಕುಡ್ಲ ಕಂಬಳ ಪ್ರಶಸ್ತಿ-2026’ರ ಪ್ರಯುಕ್ತ ಈ ಸನ್ಮಾನ ನೆರವೇರಿಸಲಾಯಿತು.
‘ನಮ್ಮ ಕುಡ್ಲ’ ವಾಹಿನಿಯ ಮುಖ್ಯಸ್ಥ ಲೀಲಾಕ್ಷ ಕರ್ಕೇರ ಅವರು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಜಯಪ್ರಕಾಶ್ ತುಂಬೆ, ಪುಷ್ಪರಾಜ್ ಜೈನ್ ಹಾಗೂ ‘ನಮ್ಮ ಕುಡ್ಲ’ ವಾಹಿನಿಯ ಮಾರ್ಕೆಟಿಂಗ್ ಮ್ಯಾನೇಜರ್ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.