ತಾಕತ್ತಿದ್ದರೆ ಗೃಹಸಚಿವ ವಿರುದ್ಧ ರೌಡಿಶೀಟ್ ಹಾಕಿ: ಶ್ರೀಕಾಂತ್ ಶೆಟ್ಟಿ ಸವಾಲು

ತಾಕತ್ತಿದ್ದರೆ ಗೃಹಸಚಿವ ವಿರುದ್ಧ ರೌಡಿಶೀಟ್ ಹಾಕಿ: ಶ್ರೀಕಾಂತ್ ಶೆಟ್ಟಿ ಸವಾಲು


ಪುತ್ತೂರು: ಕೇವಲ ಭಾಷಣ ಮಾಡಿದರೆ, ಒಂದೆರಡು ಪ್ರಕರಣಗಳಿದ್ದರೆ ಅಂತವರ ಮೇಲೆ ರೌಡಿಶೀಟರ್ ಹಾಕುತ್ತೀರಿ. ನೀವು ಕೈಕಟ್ಟಿ ನಿಲ್ಲುವ ಗೃಹಸಚಿವ ಪ್ರಿಯಾಂಕ ಖರ್ಗೆ ಮೇಲೂ ೯ ಕ್ರಿಮಿನಲ್ ಪ್ರಕರಣಗಳಿದ್ದು, ನಿಮಗೆ ತಾಕತ್ತಿದ್ದರೆ ಅವರ ವಿರುದ್ಧವೂ ರೌಡಿಶೀಟರ್ ಇತರ ರೌಡಿಗಳ ಜತೆಗೆ ಪರೇಡ್ ನಡೆಸಿ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸವಾಲು ಹಾಕಿದರು.


ಅವರು ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸೋಮವಾರ ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. 


ಪೊಲೀಸರು ಹಿಂದೂ ಸಂಘಟನೆಯನ್ನು ಧಮನ ಮಾಡುವ ‘ಗುತ್ತಿಗೆ’ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಬಕೆಟ್ ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ರಾಜಕಾರಣಿಗಳನ್ನು ಮೆಚ್ಚಿಸಲು ಚಮಚಾಗಿರಿ ಮಾಡುತ್ತಿರುವ ಪೊಲೀಸರು ನಿಮ್ಮ ಖಾಕಿ ಕಳಚಿಟ್ಟು ನಡೆಯಿರಿ. ಪೊಲೀಸ್ ರಾಜ್ಯ ನಿಲ್ಲುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಪೊಲೀಸರ ಲಾಠಿ ಬೂಟು ಕೇಸು ನಮಗೆ ದೊಡ್ಡದಲ್ಲ ಎಂದು ಹೇಳಿದರು.

ಕೇವಲ ಮಾದ್ಯಮಗಳೊಂದಿಗೆ ಮಾತನಾಡಿದ ಕಾರಣಕ್ಕಾಗಿ ಜಗದೀಶ್ ಕಾರಂತ್, ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೇಸು ದಾಖಲಿಸುವ ಪೊಲೀಸರು ಪುತ್ತೂರಿನಲ್ಲಿ ಅಂಗಡಿ ಮೇಲೆ ದಾಳಿ ಮಾಡಿ, ಮಹಿಳೆಗೆ ಹಲ್ಲೆ ನಡೆಸಿದ ಹಾಗೂ ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ಮಾಡಿದ ಆರೋಪಿಗಳಿಗೆ ಯಾವುದೇ ಕೇಸು ದಾಖಲಿಸಿಲ್ಲ. ಹೊಡೆದವರು ರಾಜರೋಷವಾಗಿ ನಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಾನು ಓರ್ವ ಪ್ರಾಮಾಣಿಕ, ಕಟ್ಟುನಿಟ್ಟಿನ ಅಧಿಕಾರಿ ಎಂದು ಹೆಸರು ಗಳಿಸಲು ಹಿಂದೂಗಳ ಧಮನನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಎಸ್ಪಿ ಹುದ್ದೆ ಶಾಶ್ವತವಲ್ಲ. ಜಿಲ್ಲೆಯಲ್ಲಿ ಅದೆಷ್ಟೋ ಎಸ್ಪಿಗಳು ಬಂದು ಹೋಗಿದ್ದಾರೆ. ಜಿಲ್ಲೆಯಲ್ಲಿ ಹಿಂದೂ ಸಮಾಜಕ್ಕೆ ಆಗುವ ಅನ್ಯಾಯವನ್ನು ಎದುರಿಸಲು ಯಾವುದೇ ಅಧಿಕಾರಿ ಇದ್ದರೂ ಹಿಂದೂ ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಗಲಭೆಗೆ ಕಾರಣರಾದ ಗ್ರಾಹಕರು ನಾವು ಕೇಸ್ ವಾಪಾಸು ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣವೇ ದಾಖಲಿಸಿರುವ ಕೇಸು ಹಿಂತೆಗೆಯಬೇಕು. ಅಲ್ಲದೆ ಗಲಭೆ ನಡೆಸಿದ ನಿಷೇಧಿತ ಪಿಎಫ್‌ಐ ಕಾರ್ಯಕರ್ತರು ಎನ್ನಲಾದವರ ಮೇಲೆ ಕೋಕಾ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು. ಘಟನೆ ಬಳಿಕ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪುತ್ತೂರು ಪೊಲೀಸರ ಮೇಲೂ ಕೇಸು ದಾಖಲಿಸಬೇಕು. ಜಿಲ್ಲೆಯಲ್ಲಿ ಪೊಲೀಸ್ ರಾಜ್ಯ ನಿಲ್ಲಬೇಕು. ಈ ಕಾರ್ಯ ನಡೆಯದಿದ್ದಲ್ಲಿ ನಾವು ತಿಂಗಳಿಗೊಂದು ಚಲೋ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಹಿಂದೂ ಜಾಗರಣಾವೇದಿಕೆ ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಕಾಣಿಯೂರು ಮಾತನಾಡಿ, ಹಿಂದೂಗಳಿಗೆ ನ್ಯಾಯ ಒದಗಿಸಲು ಹಿಂದೂ ಸಮಾಜ ಯಾವತ್ತೂ ಸಿದ್ಧವಿದೆ. ಹಲ್ಲೆಗೊಳಗಾದ ಕುಟುಂಬದ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಕಾನೂನಿಗೆ ಅಧಿಕಾರಿಗಳು ಬೆಲೆ ನೀಡಿಲ್ಲ. ಈ ತನಕ ಪ್ರಕರಣದಲ್ಲಿ ಹಿಂದೂಗಳಿಗೆ ನ್ಯಾಯ ಸಿಕ್ಕಿಲ್ಲ. ಈ ಪ್ರಕರಣಕ್ಕೆ ನಾವು ಅಂತ್ಯ ಮಾಡಬೇಕೋ.. ನೀವು ಮಾಡುತ್ತೀರಾ ನೋಡೋಣ ಎಂದು ಸವಾಲು ಹಾಕಿದರು.

ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಮಾತನಾಡಿ, ಇದು ಪುತ್ತೂರು ಒಡೆಯ ಮಹಾಲಿಂಗೇಶ್ವರನ ಮಣ್ಣು. ಈ ಮಣ್ಣಿನಲ್ಲಿ ಅನಾಚಾರ, ಅನ್ಯಾಯ ಮಾಡಿದವರಿಗೆ ಉಳಿಗಾಲವಿಲ್ಲ. ಮಹಿಳೆಯರ ಮೇಲೆ ದಾಳಿ ಮಾಡಿ ದುರಂಹಕಾರ ವರ್ತನೆ ತೋರಿದವರಿಗೆ ಇಲ್ಲಿ ಶಿಕ್ಷೆ ಖಂಡಿತಾ ಆಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ, ರಾಜೇಶ್ ನಾಯಕ್, ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುನೀತ್ ಅತ್ತಾವರ, ಗೋಪಾಲಕೃಷ್ಣ ಹೇರಳೆ, ಆರ್.ಸಿ.ನಾರಾಯಣ, ಕಿರಣ್ ಚಂದ್ರ ಪುಷ್ಪಗಿರಿ, ವೆಂಕಟ್ ವಳಲಂಬೆ ಮತ್ತಿತರರು ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಡಾ.ಕೃಷ್ಣಪ್ರಸನ್ನ ಸ್ವಾಗತಿಸಿದರು. ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ ವಂದಿಸಿದರು. ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article