ಮಾನವೀಯ ಸ್ಪಂದನೆಯೂ ಛಾಯಾಗ್ರಾಹಕರಿಗಿರಬೇಕು: ವಾಲ್ಟರ್ ನಂದಳಿಕೆ
ಮೂಡುಬಿದಿರೆ ಛಾಯಾಗ್ರಾಹಕರ ಕುಟುಂಬಗಳ ಸೌಹಾರ್ದ ಕೂಟ "ಬಾಂಧವ್ಯ-2026"
ಇಂದು ಅಪಘಾತಗಳಾದಾಗ ಸಹಾಯ ಮಾಡುವುದಕ್ಕಿಂತ ಮೊಬೈಲ್ನಲ್ಲಿ ಫೋಟೋ ತೆಗೆದು ವೈರಲ್ ಮಾಡುವುದೇ ಹೆಚ್ಚಾಗಿದೆ. ಆದರೆ ಛಾಯಾಗ್ರಾಹಕರು ಸಮಾಜಕ್ಕೆ ಹಾನಿಯಾಗದಂತೆ, ಮಾನವೀಯತೆಯ ಸಂದೇಶ ನೀಡುವ ಜವಾಬ್ದಾರಿ ಹೊರಬೇಕು ಎಂದು ವಾಲ್ಟರ್ ನಂದಳಿಕೆ ಹೇಳಿದರು. ಛಾಯಾಗ್ರಾಹಕರ ಕಾರ್ಯಕ್ರಮಕ್ಕೆ ಕುಟುಂಬದವರನ್ನೂ ಒಳಗೊಳಿಸಿರುವುದು ವಿಶೇಷವಾಗಿದ್ದು, ಛಾಯಾಗ್ರಹಣದ ಮುಖ್ಯ ಆಕರ್ಷಣೆ ಚಿತ್ರವೇ ಆಗಿದೆ ಎಂದರು.
ವಲಯ ಅಧ್ಯಕ್ಷ ನಿತಿನ್ ಬೆಳುವಾಯಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಛಾಯಾಗ್ರಾಹಕ ಗುಣಪಾಲ ಅವರನ್ನು ಸನ್ಮಾನಿಸಲಾಯಿತು. "ಛಾಯಾರತ್ನ" ಪ್ರಶಸ್ತಿ ಪಡೆದಿರುವ ಅಭಯ ಕುಮಾರ್ ಜೈನ್ ಅವರನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿ ಸುಯೋಗ್ ಅವರಿಗೆ ವಿದ್ಯಾಥಿ೯ ವೇತನ ಹಾಗೂ ದಿನೇಶ್ ಅವರಿಗೆ ಚಿಕಿತ್ಸೆಗೆ ಆಥಿ೯ಕ ನೆರವು ನೀಡಲಾಯಿತು.
ಕ್ರೀಡಾ ಕೂಟ ಮತ್ತು ಜಿಲ್ಲಾ ಮಟ್ಟದ ಫೋಟೋ ಸ್ಪರ್ಧೆಯ ಪೋಸ್ಟರ್ ನ್ನು ಬಿಡುಗಡೆ ಮಾಡಲಾಯಿತು.
ವಲಯದ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಕುಟುಂಬಗಳ ನಡುವೆ ಸೌಹಾರ್ದತೆ ಮತ್ತು ಆತ್ಮೀಯತೆ ಬೆಳೆಸುವುದರ ಜೊತೆಗೆ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಛಾಯಾಗ್ರಾಹಕ ಸದಸ್ಯರು ಹಾಗೂ ಕುಟುಂಬಸ್ಥರು ಪರಸ್ಪರ ಆತ್ಮೀಯವಾಗಿ ಬೆರೆತರು.
ಮುಖ್ಯ ಅತಿಥಿಗಳಾಗಿ ಅಜಯ್ ಮಂಗಳೂರು, ದೇವರಾಜ್ ಶೆಟ್ಟಿ, ರವಿ ಕೋಟ್ಯಾನ್, ವಿಲ್ಫ್ರೆಡ್ ಮೆಂಡೋನ್ಸಾ, ಉದಯಕುಮಾರ್ ಎಂ, ಪದ್ಮನಾಭ ಮಿಜಾರು, ನಮಿತ್ ಬಂಗೇರ ಹಾಗೂ ರಂಜಿತ್ ಕೋಟ್ಯಾನ್ ಉಪಸ್ಥಿತರಿದ್ದರು.
ವಿಲ್ಫ್ರೆಡ್ ಮೆಂಡೋನ್ಸ ಸ್ವಾಗತಿಸಿದರು. ಕಲಾವಿದ ಸಂದೀಪ್ ಶೆಟ್ಟಿ ರಾಯಿ ಕಾರ್ಯಕ್ರಮ ನಿರೂಪಿಸಿದರು. ನವೀನ್ ಬಂಗೇರ ವಂದಿಸಿದರು.
ಇದಕ್ಕೂ ಮೊದಲು ಬೆಳುವಾಯಿ ಬಟರ್ ಫ್ಲೈ ಪಾರ್ಕ್ ಸಂಸ್ಥಾಪಕ ಸಮ್ಮಿಲನ್ ಶೆಟ್ಟಿ ಅವರಿಂದ ಪರಿಸರ ಸಂರಕ್ಷಣೆ ಮಾಹಿತಿ ಮತ್ತು ಸದಸ್ಯರಿಗೆ ಗಿಡ ವಿತರಣೆ ನಡೆಸಲಾಯಿತು.
