ದೇಶದಲ್ಲಿ ಇತಿಹಾಸ ನಿರ್ಮಾಣ ಮಾಡುವ ಶಕ್ತಿ ವಿದ್ಯಾರ್ಥಿಗಳಿಗಿರಬೇಕು: ಸಚಿವ ಯು.ಟಿ. ಖಾದರ್
ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದ ಉಳ್ಳಾಲ ತಾಲೂಕು ಮಟ್ಟದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ದೇಶದ ಜನಸಂಖ್ಯೆ ೩೩ಕೋಟಿ ಇತ್ತು. ಈ ವೇಳೆ ಇಷ್ಟು ಜನರಿಗೆ ಸುಸಜ್ಜಿತ ಊಟದ ವ್ಯವಸ್ಥೆ ಮಾಡಲು ಆಗಿರಲಿಲ್ಲ. ಈಗ ದೇಶದಲ್ಲಿರುವ ೧೪೦ ಕೋಟಿ ಜನರಿಗೆ ಮೂರು ಹೊತ್ತಿನ ಊಟ ಒದಗಿಸುವ ಜತೆಗೆ ವಿದೇಶಕ್ಕೆ ಆಹಾರ ಕಳಿಸುವ ವ್ಯವಸ್ಥೆ ಭಾರತದಲ್ಲಿ ಇದೆ ಎಂದರು.
ನಮ್ಮ ದೇಶದ ಮೇಲೆ ಬೇರೆ ಬೇರೆ ಆಕ್ರಮಣಗಳು ನಡೆಯುತ್ತಿದ್ದರೂ ಈ ದೇಶದಲ್ಲಿ ನಾವು ನೆಮ್ಮದಿಯಾಗಿರಲು ಗಡಿ ಕಾಯುವ ಸೈನಿಕರು ಕಾರಣ. ಧಾರ್ಮಿಕ ನಂಬಿಕೆ ನಮ್ಮ ಮಣ್ಣಿನ ಶಕ್ತಿ, ಇನ್ನೊಬ್ಬನ ಮನಸ್ಸಿಗೆ ನೋವು ಮಾಡಲು ಯಾವುದೇ ಧರ್ಮಗಳು ಕಲಿಸಿಲ್ಲ. ಉಳ್ಳಾಲ ಅಭಿವೃದ್ಧಿಗೆ ನೀಲಿ ನಕಾಶೆ ಹಾಕಿದ್ದೇವೆ ಸೇತುವೆ ಅಗಲೀಕರಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ಶೀಘ್ರ ನಡೆಯಲಿದೆ. ನನಗೆ ಎಷ್ಟು ಹುದ್ದೆ ಸಿಕ್ಕಿದರೂ ನನ್ನ ಕ್ಷೇತ್ರದ ಮೇಲೆ ಕಾಳಜಿ ನನಗಿದೆ ಎಂದರು.
ಈ ಕಾರ್ಯಕ್ರಮದ ಪ್ರಯುಕ್ತ ಅಬ್ಬಕ್ಕ ಸರ್ಕಲ್ನಿಂದ ಓವರ್ ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳಿಂದ ಪಥ ಸಂಚಲನ ಜಾಥಾ ನಡೆಯಿತು.ಈ ಜಾಥಾದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ತಹಶೀಲ್ದಾರ್ ಪ್ರಶಾಂತ್, ಉಪ ತಹಶೀಲ್ದಾರ್ ವಿಜಯ್ ವಿಕ್ರಮ್, ಕಂದಾಯ ನಿರೀಕ್ಷಕ ಪ್ರಮೋದ್, ಕಣಚೂರು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕಣಚೂರು ಮೋನು, ನಗರ ಸಭೆ ಪೌರಾಯುಕ್ತ ಸಂತೋಷ್, ಆರ್ಓ ನವೀನ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಬಿಇಒ ಈಶ್ವರ್, ಸುರೇಖ ಚಂದ್ರ ಹಾಸ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಅಬ್ದುಲ್ ಸಲಾಮ್ ಉಚ್ಚಿಲ,ಮುಸ್ತಫಾ ಮಲಾರ್, ಅಬುಸಾಲಿ ಕಿನ್ಯ, ಸೈಫುಲ್ಲಾ ಸೋಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ತ್ಯಾಗಂ ಹರೇಕಳ ಸ್ವಾಗತಿಸಿದರು. ಮೋಹನ್ ಶಿರ್ಲಾಲು, ಕೆಎಮ್ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.