5 ವರ್ಷಗಳಿಂದ ಅಲೆದಾಡುತ್ತಿದ್ದ ಅಸಹಾಯಕ ಯುವಕನ ರಕ್ಷಣೆ: ಮಂಜೇಶ್ವರದ ಸಾಯಿ ನಿಕೇತನ ಆಶ್ರಮಕ್ಕೆ ದಾಖಲು
ಅಂಗಡಿಗಳ ಮುಂದೆ ಆಕ್ರೋಶ, ಪೊಲೀಸರ ಸಕಾಲಿಕ ಸ್ಪಂದನೆ:
ವಿಟ್ಲ-ಸಾಲೆತ್ತೂರು ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುವಕನೊಬ್ಬ ಭಿಕ್ಷೆ ಬೇಡುತ್ತಾ, ಕೆಲವೊಮ್ಮೆ ಅಂಗಡಿ ಮಾಲಿಕರ ಜೊತೆ ಆಕ್ರೋಶದಿಂದ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಜನಪ್ರತಿನಿಧಿಗಳ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ತಕ್ಷಣವೇ ‘112’ ತುರ್ತು ವಾಹನಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು.
ಮಾಹಿತಿ ಸಂಗ್ರಹಿಸಿದ ಪತ್ರಕರ್ತ:
ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ಹಾಗೂ ‘ದೀವಟಿಗೆ ಡಿಜಿಟಲ್ ಮೀಡಿಯಾ’ದ ಸಂಪಾದಕ ವಿ.ಟಿ. ಪ್ರಸಾದ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಯುವಕನೊಂದಿಗೆ ಪ್ರೀತಿಯಿಂದ ಮಾತುಕತೆ ನಡೆಸಿದರು. ಈ ವೇಳೆ ಆತನ ಹೆಸರು ಹಾಗೂ ವಿಳಾಸದ ಮಾಹಿತಿ ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಬಳಿಕ ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಅವರ ಗಮನಕ್ಕೆ ತಂದು, ಆತನನ್ನು ಸೂಕ್ತ ಆರೈಕೆಗಾಗಿ ಮಂಜೇಶ್ವರ ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮಕ್ಕೆ ದಾಖಲಿಸಲು ನಿರ್ಧರಿಸಲಾಯಿತು.
ಕೋವಿಡ್ಗೆ ಕೆಲಸ ಕಳೆದುಕೊಂಡು 5 ವರ್ಷಗಳ ಅಲೆದಾಟ:
ರಕ್ಷಣೆಗೊಳಗಾದ ಯುವಕ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಮಾರ್ಕಂಡೇಯ ದೇವಸ್ಥಾನ ರಸ್ತೆಯ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ವಿಕೇಶ್ ಪೂಜಾರಿ (35) ಎಂದು ಗುರುತಿಸಲಾಗಿದೆ.
ಈ ಹಿಂದೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ವಿಕೇಶ್, 2021ರ ಕೊರೊನಾ ಸಾಂಕ್ರಾಮಿಕದ ವೇಳೆಯಲ್ಲಿ ಕೆಲಸ ಕಳೆದುಕೊಂಡಿದ್ದರು. ಉದ್ಯೋಗ ಕಳೆದುಕೊಂಡ ಆಘಾತದಿಂದ ತೀವ್ರ ಮಾನಸಿಕ ಅಸ್ವಸ್ಥತೆಗೊಳಗಾದ ಅವರು, ಮನೆಗೂ ಹಿಂತಿರುಗದೆ ಕಳೆದ 5 ವರ್ಷಗಳಿಂದ ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಲೆದಾಡುತ್ತಿದ್ದರು.
ಮಾನವೀಯತೆಗೆ ಮೆಚ್ಚುಗೆ:
ಹಿರಿಯ ಪತ್ರಕರ್ತ ವಿ.ಟಿ. ಪ್ರಸಾದ್, ಸುಭಾಶ್ಚಂದ್ರ ಶೆಟ್ಟಿ ಹಾಗೂ ಪವಿತ್ರ ಪೂಂಜಾ ಕೊಡಂಗೆ ಅವರ ಸಕಾಲಿಕ ಸ್ಪಂದನೆಯಿಂದಾಗಿ ವಿಕೇಶ್ ಪೂಜಾರಿ ಅವರಿಗೆ ಇದೀಗ ಹೊಸ ಜೀವನದ ಭರವಸೆ ಸಿಕ್ಕಂತಾಗಿದೆ. ಪ್ರಸ್ತುತ ದೈಗೋಳಿ ಸಾಯಿ ನಿಕೇತನ ಸೇವಾಶ್ರಮದಲ್ಲಿ ಮಾನಸಿಕ ತಜ್ಞರ ಸಲಹೆಯಂತೆ ವಿಕೇಶ್ ಅವರಿಗೆ ಸೂಕ್ತ ಚಿಕಿತ್ಸೆ ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಸುಭಾಶ್ಚಂದ್ರ ಶೆಟ್ಟಿಯವರು ಆಶ್ರಮದ ನಿರ್ವಹಣೆಗಾಗಿ ವೈಯಕ್ತಿಕವಾಗಿ ದೇಣಿಗೆ ನೀಡಿ ಮಾನವೀಯತೆ ಮೆರೆದರು. ಡಾ. ಉದಯ ಕುಮಾರ್ ಹಾಗೂ ಡಾ. ಶಾರದಮ್ಮ ದಂಪತಿಗಳ ನೇತೃತ್ವದಲ್ಲಿ ಸುದೀರ್ಘ ಕಾಲದಿಂದ ಸಮಾಜಸೇವೆ ಮಾಡುತ್ತಿರುವ ಸಾಯಿ ನಿಕೇತನ ಸೇವಾಶ್ರಮದಲ್ಲಿ ವಿಕೇಶ್ ಶೀಘ್ರ ಗುಣಮುಖರಾಗಿ, ಮತ್ತೆ ತಮ್ಮ ಕುಟುಂಬವನ್ನು ಸೇರಿ ಸಾಮಾನ್ಯ ಜೀವನಕ್ಕೆ ಮರಳಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.