ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
Friday, September 18, 2026
ಮಂಗಳೂರು: ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತುಳು ಧ್ವಜ ಹಿಡಿದು ಶುಕ್ರವಾರ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗ ಸಹಿತಿಂಡಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ತುಳು ನಮ್ಮ ನೆಲದ ಭಾಷೆ ಮಾತ್ರವಲ್ಲ, ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕಿನ ಅವಿಭಾಜ್ಯ ಅಂಗ. ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವು ತುಳುನಾಡಿನ ಜನತೆಯ ಬಹುದಿನಗಳ ಆಶಯಕ್ಕೆ ಸಂದ ಗೌರವವಾಗಿದೆ. ತುಳು ಭಾಷೆ ಹಾಗೂ ಸಂಸ್ಕೃತಿಯ ಮತ್ತಷ್ಟು ಬೆಳವಣಿಗೆಗೆ ರಾಜ್ಯ ಸರಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ಈ ಐತಿಹಾಸಿಕ ನಿರ್ಣಯಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ರಾಜ್ಯ ನಿಗಮ ಮಂಡಳಿ ಅಧ್ಯಕ್ಷೆ ಲಾವಣ್ಯ ಬಳ್ಳಾಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹೀಂ ನವಾಝ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್.ಅಪ್ಪಿ, ಮುಂಚೂಣಿ ಘಟಕಾಧ್ಯಕ್ಷರಾದ ಶಾಹುಲ್ ಹಮೀದ್, ಶುಭಾಷ್ ಚಂದ್ರ ಶೆಟ್ಟಿ ಕೊಲ್ನಾಡು, ಪ್ರೇಮ್ ನಾಥ್ ಇ.ಬಿ, ಡಿಸಿಸಿ ಉಪಾಧ್ಯಕ್ಷರಾದ ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಮುಖಂಡರಾದ ವಿಕಾಸ್ ಶೆಟ್ಟಿ, ಲಾರೆನ್ಸ್ ಡಿ ಸೌಝ, ಕಿರಣ್ ಕುಮಾರ್ ಬುಡ್ಲೆಗುತ್ತು, ಹಬೀಬ್ ಕಣ್ಣೂರ್, ಆರೀಫ್ ಭಾವ ಬಂದರ್, ಯೋಗೀಶ್ ಕುಮಾರ್, ಉದಯ ಆಚಾರ್ಯ, ಅಭಿನಂದನ್ ಹರೀಶ್, ರೋಬಿನ್ ಪ್ರೀತಂ, ಬಶೀರ್ ಕಣ್ಣೂರ್, ವೆಲ್ ವಿನ್, ಆಸಿಫ್ ಬಜಾಲ್, ಸೌಹಾನ್ ಎಸ್.ಕೆ, ಸಮರ್ಥ್ ಭಟ್,ಸುಹಾನ್ ಆಳ್ವ, ಶರೀಫ್ ಬೊಕ್ಕಪಟ್ಣ, ತೌಫೀಕ್ ವಳಚ್ಚಿಲ್, ಫಯಾಝ್ ಅಮ್ಮೆಮ್ಮಾರ್, ಕೀರ್ತನ್ ಗೌಡ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.


