ಕಾಣಿಕೆ ಡಬ್ಬಿ ಕಳವು: ಅಂತರ್ ರಾಜ್ಯ ಕಳ್ಳನ ಬಂಧನ
Sunday, September 6, 2026
ಮಂಗಳೂರು: ಪುತ್ತೂರಿನ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳನನ್ನು ಪುತ್ತೂರು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ವ್ಯಕ್ತಿಯನ್ನು ಕೇರಳದ ಕಾಸರಗೋಡು ನಿವಾಸಿ ಸತೀಶ (31) ಎಂದು ಗುರುತಿಸಲಾಗಿದ್ದು, ಆತನಿಂದ ಕಳ್ಳತನ ಮಾಡಿದ ಕಾಣಿಕೆ ಡಬ್ಬಿ ಹಾಗೂ ಕಳ್ಳತನಕ್ಕೆ ಬಳಸಿದ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ:
ದೇವಸ್ಥಾನದ ಆಡಳಿತ ಮಂದಳಿಯ ಪದಾಧಿಕಾರಿ ವಿನೋದ್ ಕುಮಾರ ಬಿ. ಅವರು ಆ.25 ರಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಹೊರಗೆ ಇಟ್ಟಿದ್ದ ಕಾಣಿಕೆ ಡಬ್ಬಿ ಕಾಣೆಯಾಗಿದ್ದು, ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಆ.24 ರಂದು ರಾತ್ರಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈಡಬ್ಬಿಯಲ್ಲಿ ಸುಮಾರು 4,500 ರೂ. ಹಣ ಇದ್ದು, ಕಾಣಿಕೆ ಡಬ್ಬಿಯ ಮೌಲ್ಯ 2,500 ರೂ. ಆಗಿರುತ್ತದೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಮೇಲೆ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನ ಪ್ರಕರಣ ದಾಖಲಾಗಿದೆ.