ಅಡಿಕೆ ಎಲೆಯಿಂದ ತಯಾರಿಸಿದ ಹಾಳೆ ತಟ್ಟೆಗೆ ಎಫ್‌ಡಿಎ ನಿಷೇಧ: ನಿಷೇಧ ಮರು ಪರಿಶೀಲನೆಗೆ ಆಗ್ರಹ

ಅಡಿಕೆ ಎಲೆಯಿಂದ ತಯಾರಿಸಿದ ಹಾಳೆ ತಟ್ಟೆಗೆ ಎಫ್‌ಡಿಎ ನಿಷೇಧ: ನಿಷೇಧ ಮರು ಪರಿಶೀಲನೆಗೆ ಆಗ್ರಹ


ಮಂಗಳೂರು: ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ)ವು ಅಡಿಕೆ ಮರದ ಎಲೆಯಿಂದ ತಯಾರಿಸಿದ ಹಾಳೆ ತಟ್ಟೆಗಳನ್ನು ನಿಷೇಧಿಸಿದ್ದು, ಇದರಿಂದ ಈಗಾಗಲೇ ಭಾರತದ ಶೇ. 50ರಷ್ಟು ಉತ್ಪಾದನಾ ಘಟಕಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಗೋಪಾಲ್ ಮರಾಠೆ ಅವರ ಮಾರ್ಗದರ್ಶನದಲ್ಲಿ ನಡೆಸಲಾದ ಸಂಶೋಧನಾ ವರದಿಯನ್ನು ಸಲ್ಲಿಸಿ ನಿಷೇಧದ ಮರು ಪರಿಶೀಲನೆಗೆ ಆಗ್ರಹಿಸಲಾಗಿದೆ ಎಂದು ಅಗ್ರಿಲೀಫ್‌ನ ಅವಿನಾಶ್ ರಾವ್ ತಿಳಿಸಿದ್ದಾರೆ.

ಅಡಿಕೆ ಹಾಳೆಯ ಉತ್ಪನ್ನಗಳಿಂದ ಅರೆಕೋಲಿನ್, ಅರೆಕೈಡಿನ್, ಗುವಾಕೋಲಿನ್ ಮತ್ತು ಗುವಾಸಿನ್‌ನಂತಹ ರಾಸಾಯನಿಕಗಳು ಆಹಾರ ಪದಾರ್ಥಗಳಿಗೆ ವರ್ಗಾವಣೆ ಆಗಬಹುದು ಎಂದು ಎಫ್‌ಡಿಎ ವರದಿ ಮಾಡಿದೆ. ಈ ವರದಿಯು ಅಡಿಕೆ ಹಾಳೆ ತಟ್ಟೆ ತಯಾರಿಸುವ 5000 ದಿಂದ 7000 ಸಣ್ಣ ಮತ್ತು ಅತಿ ಸಣ್ಣ ಉತ್ಪಾದನಾ ಘಟಕಗಳಿಗೆ ಅನಿಶ್ಚಿತತೆಯನ್ನು ಉಂಟು ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ವಿಶೇಷವಾಗಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಇತರ ಪ್ರದೇಶಗಳಲ್ಲಿ ಆರ್ಥಿಕ ಬೆಂಬಲವನ್ನು ನೀಡುತ್ತಿರುವ ಈ ಅಡಿಕೆ ಹಾಳೆ ತಟ್ಟೆ ಉದ್ಯಮ ಸದ್ಯ ಅಡಕತ್ತರಿಯಲ್ಲಿದೆ. ಈ ನಡುವೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್, ಮಣಿಪಾಲದ ಮಾಹೆ ಲೈಫ್ ಸೈನ್ಸಸ್ ಮತ್ತು ಬೆಂಗಳೂರಿನ ಗ್ಲಿಮೆಟೊಮಿಕ್ಸ್ ಸೇರಿದಂತೆ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಹಾಗೂ ವಿಶೇಷ ಪರಿಣತಿ ಹೊಂದಿರುವ ಸಂಸ್ಥೆಗಳ ಸಹಯೋಗದೊಂದಿಗೆ ಅಧ್ಯಯನ ನಡೆಸಲಾಗಿದೆ. ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಮತ್ತು ಜೈವಿಕ ರಸಾಯನಶಾಸ ವಿಭಾಗದ ಮಾಜಿ ಮುಖ್ಯಸ್ಥರೂ ಆಗಿರುವ ಹಾಗೂ ಅಗ್ರಿಲೀಫ್ ಸಂಸ್ಥೆಯ ವೈಜ್ಞಾನಿಕ ಸಲಹೆಗಾರ ಡಾ. ಗೋಪಾಲ್ ಮರಾಠೆ ಮಾರ್ಗದರ್ಶನದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಈ ಸಂದರ್ಭ ಅಲ್ಕಲಾಯ್ಡ್‌ಗಳ ಮಟ್ಟವು ಎಫ್‌ಡಿಎ ಉಲ್ಲೇಖಿತ ಅಧ್ಯಯನದಲ್ಲಿ ಪರಿಶೀಲಿಸಲಾದ ಉತ್ಪನ್ನಗಳಲ್ಲಿ ವರದಿಯಾದ ಮಟ್ಟಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ. ಈವರದಿಯನ್ನು ಅಮೆರಿಕದ ಎಫ್‌ಡಿಎಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಪ್ರತಿ ಹಾಳೆ ಉತ್ಪಾದನಾ ಬ್ಯಾಚ್‌ಗಳ  ಮೌಲ್ಯಮಾಪನ, ಪಾರದರ್ಶಕ ವೈಜ್ಞಾನಿಕ ಪರಿಶೀಲನೆ ಹಾಗೂ ವಿಧಾನಗಳು ಮತ್ತು ಫಲಿತಾಂಶ ಪ್ರಕಟ, ನೈಸರ್ಗಿಕ ಆಹಾರ- ಸಂಪರ್ಕ ವಸ್ತುಗಳಿಗೆ ಪ್ರಮಾಣೀಕೃತ ಪರೀಕ್ಷಾ ವಿಧಾನ ಮತ್ತು ಮಾನದಂಡಗಳನ್ನು ನಿಗದಿಡಿಸುವುದು, ಮುಂದುವರಿದ ಅಧ್ಯಯನಕ್ಕೆ ಸಂಶೋಧಕರು, ಉದ್ಯಮ ಸಂಘಗಳು ಮತ್ತು ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳೊಂದಿಗೆ ಸಹೋಗ, ಯುಎಸ್‌ನ ಎಫ್‌ಡಿಎ ಮತ್ತು ಇತರ ಜಾಗತಿಕ ನಿಯಂತ್ರಕ ಸಂಸ್ಥೆಗಳ ಮುಂದೆ ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯಗಳನ್ನು ಮಂಡಿಸಲು ಭಾರತ ಸಹಕಾರ ಸಹಭಾಗಿತ್ವ ಕೋರುವುದು. ಸಮಗ್ರ ಮತ್ತು ಸೂಕ್ತ ವೈಜ್ಞಾನಿಕ ಮಾನದಂಡಗಳ ಮೂಲಕ ರೈತ ಸಂಬಂಽತ ಹಾಗೂ ಸುಸ್ಥಿರ ನಾವೀನ್ಯತೆಯನು ರಕ್ಷಿಸಲು ರಚನಾತ್ಮಕ ಅಂತಾರಾಷ್ಟ್ರೀಯ ಸಂವಾದ ಏರ್ಪಡಿಸುವ ಕಾರ್ಯಕ್ಕೆ ಅಗ್ರಿಲೀಫ್ ಬದ್ಧವಾಗಿದೆ ಎಂದು ತಿಳಿಸಿದರು.

ಡಾ. ಗೋಪಾಲ್ ಮರಾಠೆ, ಹರ್ಷ ಪಾಟೀಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article