ಏಳು ಗ್ರಾ.ಪಂ.ಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ
ಸಾರ್ವಜನಿಕರಿಂದ ಸರಣಿ ಭ್ರಷ್ಟಾಚಾರ, ಖಾತಾ ಬದಲಾವಣೆ, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕ ಕೆಲಸಗಳಲ್ಲಿ ಅಕ್ರಮ ಮತ್ತು ಲಂಚದ ಬೇಡಿಕೆ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ.
ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತಿ, ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ, ಮಾಣಿ ಗ್ರಾಮ ಪಂಚಾಯತಿ, ಗೊಳ್ತಮಜಲು ಗ್ರಾಮ ಪಂಚಾಯತಿ, ಪಾಣೆಮಂಗಳೂರು / ಅಡ್ಯಾರ್ ಗ್ರಾಮ ಪಂಚಾಯತಿ, ಕುವೆಟ್ಟು ಗ್ರಾಮ ಪಂಚಾಯತಿ, ಮಡಂತ್ಯಾರ್ ಗ್ರಾಮ ಪಂಚಾಯತಿ, ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಏಕಕಾಲಕ್ಕೆ ಈ 7 ಪಂಚಾಯತ್ ಕಚೇರಿಗಳಿಗೆ ದಾಳಿ ನಡೆಸಲಾಗಿದೆ.
ಕಚೇರಿಯಲ್ಲಿದ್ದ ಪ್ರಮುಖ ಕಡತಗಳು, ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್, ತೆರಿಗೆ ವಸೂಲಾತಿ, ನಿರ್ಮಾಣ ಪರವಾನಗಿ ಹಾಗೂ 15ನೇ ಹಣಕಾಸು ಯೋಜನೆಗಳ ಅನುದಾನ ಬಳಕೆಯ ಕಡತಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿದಂತೆ ವಿವರಣೆ ಪಡೆಯಲಾಗುತ್ತಿದೆ.