ಮೂಡುಬಿದಿರೆಯಲ್ಲಿ ಸರ್ವಧರ್ಮೀಯರೊಂದಿಗೆ 12ನೇ ವರ್ಷದ ‘ತೆನೆ ಹಬ್ಬ’
ಮೂಡುಬಿದಿರೆ ಡೀನರಿಯ ವಿಕಾರ್ ಫೊರೇನ್ ವಂ. ರೆವರೆಂಡ್ ಫಾ. ಓನಿಲ್ ಡಿಸೋಜಾ ಅಧ್ಯಕ್ಷತೆ ವಹಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವರ ಮೇಲಿನ ಅಗಾಧ ವಿಶ್ವಾಸ ಮತ್ತು ವಿಧೇಯತೆಯಿಂದ ಮಾತೆ ಮೇರಿಯವರು ಯೇಸುವಿಗೆ ಜನ್ಮ ನೀಡುವ ಭಾಗ್ಯ ಪಡೆದರು. ಪ್ರಕೃತಿಯ ಮೇಲಿನ ಕೃತಜ್ಞತೆಯೇ ತೆನೆ ಹಬ್ಬದ ಮೂಲ ಉದ್ದೇಶ. ಮನುಷ್ಯ ಎಷ್ಟೇ ಸಾಧನೆ ಮಾಡಿದರೂ ಮಳೆ ಹಾಗೂ ಪ್ರಕೃತಿಯ ವಿಚಾರದಲ್ಲಿ ದೇವರನ್ನೇ ಅವಲಂಬಿಸಿದ್ದಾನೆ ಎಂದರು.
ಮುಂದಿನ ದಿನಗಳಲ್ಲಿ ಅಭಾವದ ಆತಂಕವಿರುವುದರಿಂದ ದೇವರಲ್ಲಿ ವಿಧೇಯರಾಗಿ ಮಳೆಗಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.
ರಾಜ್ಯದ 16 ಕಥೋಲಿಕ್ ಒಕ್ಕೂಟಗಳ ಪೈಕಿ ದಕ್ಷಿಣ ಕನ್ನಡ-ಉಡುಪಿ ಒಕ್ಕೂಟವು ಗುಣಮಟ್ಟ ಹಾಗೂ ಕಾರ್ಯವೈಖರಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ, ಕನ್ಯಾ ಮರಿಯಮ್ಮನವರ ಜನ್ಮೋತ್ಸವದ ‘ಮೊಂತಿ ಫೆಸ್ಟ್’ ಕ್ರೈಸ್ತ ಸಮುದಾಯದ ಹಬ್ಬ ಮಾತ್ರವಲ್ಲದೆ, ಕರಾವಳಿಯ ಸಾಮುದಾಯಿಕ ಸಾಮರಸ್ಯ, ಪ್ರಕೃತಿ ಪ್ರೇಮ ಹಾಗೂ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟ ಆಚರಣೆ ಎಂದರು. ಕುಟುಂಬದವರೆಲ್ಲರೂ ಒಟ್ಟಾಗಿ ಹೊಸ ಅಕ್ಕಿಯ ಊಟ ಮಾಡುವ ಈ ಹಬ್ಬವು ನಾಗರಪಂಚಮಿ, ಕೃಷ್ಣಾಷ್ಟಮಿ ಹಾಗೂ ಗಣೇಶ ಚತುರ್ಥಿಯಷ್ಟೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದೆ ಎಂದರು.
ವೇದಿಕೆಯಲ್ಲಿ ಕಥೋಲಿಕ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷೆ ಮೇಬಲ್ ಲೋಬೋ, ಟೆಂಪಲ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಡೆನಿಸ್ ಪಿರೇರಾ, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕಾರ್ಡೋಜ, ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ರಾಕಿ ಮಸ್ಕರೇನಸ್, ಮೂಡುಬಿದಿರೆ ತ್ರಿಭುವನ್ ಜೆಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ, ಐಸಿವೈಎಂ ಮೂಡುಬಿದಿರೆ ವಲಯದ ಕಾರ್ಯದರ್ಶಿ ಕೆಲ್ವಿನ್ ಪಿಂಟೋ ಹಾಗೂ ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಉಪಸ್ಥಿತರಿದ್ದರು.
ಐಸಿವೈಎಂ ಮೂಡುಬಿದಿರೆ ಡೀನರಿ ಅಧ್ಯಕ್ಷ ಕಿರಣ್ ಪಿರೇರಾ ಸ್ವಾಗತ ಭಾಷಣ ಮಾಡಿ ಹಬ್ಬದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ಲೇಡಿ ಉಪಾಧ್ಯಕ್ಷೆ ಅನಿಶಾ ಕಾರ್ಡೆರೋ ಕಾಯ೯ಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಾಲ್ವಿನ್ ಆರನ್ ಪಿಂಟೋ ವಂದಿಸಿದರು.
ಐಸಿವೈಎಂ ಮೂಡುಬಿದಿರೆ ಡೀನರಿ ಕೌನ್ಸಿಲ್ ಸದಸ್ಯರ ಸಮನ್ವಯದಲ್ಲಿ 10 ಬಗೆಯ ನೋವೆ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಯಿತು. ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.