ಭಾರತೀಯ ಸಂಸ್ಕೃತಿಯ ಜೀವನಾಡಿ ಸಂಸ್ಕೃತ: ವಿದ್ವಾನ್ ಗಾಳಿಮನೆ ವಿನಾಯಕ ಭಟ್
ಅವರು ಮೂಡುಬಿದರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಸ್ಕೃತ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆಯ ವೈಶಿಷ್ಟ್ಯ, ಅದರ ವೈಜ್ಞಾನಿಕತೆ, ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಭಾರತೀಯ ಜೀವನಪದ್ಧತಿಯೊಂದಿಗಿನ ಅದರ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಸಂಸ್ಕೃತದ ಅಧ್ಯಯನವು ಕೇವಲ ಭಾಷೆಯ ಕಲಿಕೆಯಾಗದೆ, ಭಾರತೀಯ ಜ್ಞಾನಪರಂಪರೆಯ ಆಳಕ್ಕೆ ಇಳಿಯುವ ಒಂದು ಸುಂದರ ಯಾತ್ರೆ. ಸಂಸ್ಕೃತದ ಪ್ರತಿಯೊಂದು ಪದದಲ್ಲಿಯೂ ಒಂದು ಪರಂಪರೆಯ ಉಸಿರಿದೆ; ಪ್ರತಿಯೊಂದು ಶ್ಲೋಕದಲ್ಲಿಯೂ ಒಂದು ಜೀವನದರ್ಶನವಿದೆ. ಇಂತಹ ಭಾಷೆಯ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆಯ ಜೊತೆಗೆ ಸಂಸ್ಕೃತಿ, ಮೌಲ್ಯ ಮತ್ತು ಚಿಂತನೆಯ ಆಳವನ್ನು ಬೆಳೆಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ನಿಧಿ ಸಂಸ್ಕೃತ.
ಭಾರತೀಯ ಆಚಾರ-ವಿಚಾರ, ಮೌಲ್ಯಗಳು ಜೀವನ ಪಥದರ್ಶಕ ಚಿಂತನೆಗಳು ಸಂಸ್ಕೃತದಲ್ಲಿ, ಏಕಾಗ್ರತೆ, ತಾರ್ಕಿಕ ಚಿಂತನೆ, ಭಾಷಾ ಕೌಶಲ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತ ಸಹಕಾರಿ. ಭಾಷೆಗಳಿಗೆ ಮಾತೆ, ಸಂಸ್ಕೃತಿಯ ಬೇರು ಸಂಸ್ಕೃತ. ಸಂಸ್ಕೃತ ದೇವಭಾಷೆ ಮಾತ್ರವಲ್ಲ ಅದು ನಮ್ಮ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಹೃದಯವನ್ನು ಸ್ಪರ್ಶಿಸುವ ಭಾವ ಭಾಷೆಯೂ ಹೌದು ಎಂದರು.
ಕಾಲೇಜಿನ ಉಪಪ್ರಾಂಶುಪಾಲರಾದ ಸುನಾದ್ ರಾಜ್ ಜೈನ್, ತೇಜಸ್ವಿ ಭಟ್ಟ,ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ಟ ಹಾಗೂ ಅಧ್ಯಾಪಕರಾದ ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು.
ಕಳೆದ ವರ್ಷ ಸಂಸ್ಕೃತ ಭಾಷೆಯಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು
ವಿದ್ಯಾರ್ಥಿನಿ ಹಿಮಾನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.