ಪುತ್ತೂರಿನಲ್ಲಿ ‘ನಿಲುಗಡೆ’ಯಾಗದ ವಂದೇ ಭಾರತ್ ರೈಲು: ನಿಲ್ದಾಣದಲ್ಲಿ ಸ್ವಾಗತಕ್ಕಾಗಿ ಕಾದ ಮಂದಿಗೆ ನಿರಾಶೆ
ಪುತ್ತೂರು: ಬೆಂಗಳೂರು-ಮಂಗಳೂರು ನಡುವಣ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ನಡೆದಿದೆ. ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಯಾಗಲಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಸ್ವಾಗತಕ್ಕಾಗಿ ಕಾದ ಮಂದಿ ನಿರಾಶೆಯಿಂದ ವಾಪಾಸಾದ ಪ್ರಸಂಗ ನಡೆದಿದೆ. ಪುತ್ತೂರು ಕಬಕ ರೈಲ್ವೇ ನಿಲ್ದಾಣದಲ್ಲಿ 2 ನಿಮಿಷಗಳ ಕಾಲ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ ಎಂದು ರೈಲ್ವೇ ವೇಳಾಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಈ ರೈಲು ನಿಗದಿತ ಸಮಯಕ್ಕಿಂತ ಸುಮಾರು 1 ಗಂಟೆ 22 ನಿಮಿಷಕ್ಕೆ ಮುಂಚಿತವಾಗಿ ಪುತ್ತೂರು ನಿಲ್ದಾಣಕ್ಕೆ ತಲುಪಿ ನಿಲುಗಡೆಯಾಗದೆ ಸಾಗಿತ್ತು.
ರೈಲಿನ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿ ಪ್ರಕಾರ ಯಶವಂತಪುರದಿಂದ ಬೆಳಿಗ್ಗೆ 6.50ಕ್ಕೆ ಹೊರಟು ಮಧ್ಯಾಹ್ನ 2.50ಕ್ಕೆ ಮಂಗಳೂರಿನ ಜಂಕ್ಷನ್ ಗೆ ತಲುಪಬೇಕಿತ್ತು. ಈ ಹಿನ್ನಲೆಯಲ್ಲಿ 2.34 ನಿಮಿಷಕ್ಕೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ನಿಲ್ದಾಣದಲ್ಲಿ ಬಳಕೆದಾರರು, ಬಿಜೆಪಿ ಮುಖಂಡರು ಕಾದು ಸ್ವಾಗತಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ ರೈಲು 1ಗಂಟೆ 12 ನಿಮಿಷಕ್ಕೆ ಪುತ್ತೂರು ರೈಲ್ವೇ ನಿಲ್ದಾಣದ ಮೂಲಕ ಸಂಚರಿಸಿತ್ತು. ಮಂಗಳೂರಿನಿಂದ ವಾಪಾಸಾದ ರೈಲು ಕೂಡಾ ನಿಗದಿತ ಸಮಯಕ್ಕಿಂತ ಬೇಗನೇ ಬೆಂಗಳೂರುಗೆ ಸಂಚರಿಸಿತ್ತು. ವಾಪಾಸು ಬರುವಾಗ ರೈಲು ನಿಲುಗಡೆಯಾಗಲಿದೆ ಎಂಬ ಆಶಾಭಾವನೆಯಲ್ಲಿ ಕುಳಿತವರಿಗೆ ಮತ್ತೆ ನಿರಾಶೆಯಾಗಿತ್ತು.
ವಂದೇ ಭಾರತ್ ಪುತ್ತೂರು ಕಬಕ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಯಾಗುವಂತೆ ಮನವಿ ಮಾಡಲಾಗಿದೆ. ರೈಲ್ವೇ ಇಲಾಖೆ ಇದಕ್ಕೆ ಸ್ಪಂಧಿಸಿದೆ ಎಂದು ನ್ಯಾಯವಾದಿ ಅರುಣ್ ಶಾಮ್ ಮತ್ತು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಹೇಳಿಕೆಗಳ ಮೂಲಕ ತಿಳಿಸಿದ್ದರು. ಆದರೆ ವಂದೇ ಭಾರತ್ ತನ್ನ ಪ್ರಾಯೋಗಿಕ ಸಂಚಾರದ ವೇಳೆಯಲ್ಲಿಯೇ ನಿಲುಗಡೆಗೊಳ್ಳದಿರುವುದು ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ.