Mangalore: ಗಣರಾಜ್ಯೋತ್ಸವ ಧ್ವಜಾರೋಹಣ ನಡೆಸಿ ಮೃತ್ಯು
Friday, January 26, 2024
ಮಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನಡೆಸಿದ ವ್ಯಕ್ತಿಯೊಬ್ಬರು ಮನೆಗೆ ತೆರಳಿದಾಗ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ನಗರದ ಬಿಜೈ ನ್ಯೂ ರೋಡ್ನಲ್ಲಿರುವ ಫೆಲಿಸಿಟಿ ಅಪಾಟ್೯ಮೆಂಟ್ ಅಸೋಸಿಯೇಶನ್ ವತಿಯಿಂದ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣವನ್ನು ಅಪಾಟ್೯ಮೆಂಟ್ನ ಹಿರಿಯ ನಾಗರೀಕರಾದ, ನಿವೃತ್ತ ಸರಕಾರಿ ಅಧಿಕಾರಿ ಅಬ್ದುಲ್ ಸಮದ್ (80) ಅವರು ಧ್ವಜಾರೋಹಣ ನಡೆಸಿದ್ದರು. ನಂತರ ಭಾಷಣವನ್ನೂ ಮಾಡಿದ್ದ ಅವರು ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೂ ಹಸ್ತಲಾಘವ ಮಾಡಿ, ಮನೆಗೆ ಲಿಫ್ಟ್ನಲ್ಲಿ ತೆರಳಿದ್ದರು.
ಮನೆಯ ಒಳಗೆ ಬಂದು ಆಸೀನರಾಗಿದ್ದಾಗ ಇದ್ದಕ್ಕಿಂದಂತೆ ಕುಸಿದು ಬಿದ್ದರು. ತಕ್ಷಣವೇ ಅಕ್ಕಪಕ್ಕದ ನಿವಾಸಿಗಳು ಬಂದು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಯಿತು.
ಮೂಲತಃ ಕುಂದಾಪುರ ಗಂಗೊಳ್ಳಿ ನಿವಾಸಿಯಾಗಿರುವ ಅವರ ಮೃತದೇಹವನ್ನು ನಂತರ ಊರಿಗೆ ಕೊಂಡೊಯ್ಯಲಾಯಿತು.