Moodubidire: ಜ.28: ಮೂಡುಬಿದಿರೆಯಲ್ಲಿ ಸೋಮಪ್ಪ ಸುವರ್ಣ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಪ್ರಗತಿಪರ ಕೃಷಿಕ, ಶಿಕ್ಷಣ ತಜ್ಞ, ಸಾಮಾಜಿಕ ನೇತಾರ, ಮಾಜಿ ಶಾಸಕ ದಿ. ಕೆ. ಸೋಮಪ್ಪ ಸುವರ್ಣರ ಹನ್ನೆರಡನೇ ವರ್ಷದ ಸಂಸ್ಮರಣೆ ಹಾಗೂ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಜ.28 ರಂದು ಸಂಜೆ 5 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ, ಸಮಿತಿಯ ಗೌರವಾಧ್ಯಕ್ಷ ಕೆ. ಅಭಯಚಂದ್ರ ಅವರು ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸೋಮಪ್ಪ ಸುವರ್ಣ ನೆರಳು-ನೆಂಪು ಸಮಿತಿ, ಮೂಲ್ಕಿ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸೋಮಪ್ಪ ಸುವರ್ಣ ಅವರು ಈ ಕ್ಷೇತ್ರದ ಮಾಜಿ ಶಾಸಕರಾಗಿ ಸಾಕಷ್ಡು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ನಾನು ಮೂರು ಬಾರಿ ಶಾಸಕನಾಗಿದ್ದಾಗ ಅವರು ತುಂಬಾ ಸಹಕಾರ ನೀಡಿದ್ದಾರೆ, ಮೂಡುಬಿದಿರೆಗೆ ಅವರ ಕೊಡುಗೆಗಳಿದೆ, ಅವರ ಋಣ ಮೂಡುಬಿದಿರೆಯವರಿಗಿದೆ, ಹಾಗಾಗಿ ಈ ಕಾರ್ಯಕ್ರಮವನ್ನು ಮೂಡುಬಿದಿರೆಯಲ್ಲೇ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತುಳು-ಕನ್ನಡ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಸೋಮಪ್ಪ ಸುವರ್ಣರ ನೆಂಪು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ವಾಲ್ಪಾಡಿ ಆನೆಗುಡ್ಡೆಯ ನಾಬರ್ಟ್ ಪಿರೇರ, ಸಮಾಜ ಸೇವಕ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್ ಹಾಗೂ ಕೃಷಿ ಕ್ಷೇತ್ರದ ಸಾಧಕ ನಾಗರಾಜ ಶೆಟ್ಟಿ ಅಂಬೂರಿ ಅವರಿಗೆ 2024ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.