Putturu: ತಿಂಗಳಾಂತ್ಯದಲ್ಲಿ ಮಂಡಲ: ಮೋರ್ಚಾ ತಂಡ ರಚನೆ
ಪುತ್ತೂರು: ಬಿಜೆಪಿಯಲ್ಲಿ ಈಗಾಗಲೇ ರಾಜ್ಯದಲ್ಲಿ ಹೊಸ ತಂಡ ರಚನೆಯಾಗಿದೆ. ಈ ತಿಂಗಳ ಅಂತ್ಯದೊಳಗೆ ಮಂಡಲ ಹಾಗೂ ಮೋರ್ಚಾಗಳ ತಂಡವೂ ರಚನೆಯಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಬಿಜೆಪಿ ರಾಜ್ಯ ಜವಾಬ್ದಾರಿಗೆ ಆಯ್ಕೆಗೊಂಡ ಬಳಿಕ ಪುತ್ತೂರಿಗೆ ಪ್ರಥಮ ಭೇಟಿ ನೀಡಿದ ಅವರು ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.
ಈಗಾಗಲೇ ವಿಜಯೇಂದ್ರ ಅವರು ರಾಜ್ಯದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜಿಲ್ಲೆಯ ಅಧ್ಯಕ್ಷರ ಘೋಷಣೆಯೂ ಆಗಿದೆ. ಹಳೆಯ ತಂಡ ಹಾಗೂ ಹೊಸ ತಂಡ ಜತೆಯಾಗಿ ಸಂಘಟನಾತ್ಮಕವಾಗಿ ಕೆಲಸ ಮಾಡಲಿದೆ. ಪಕ್ಷದ ಕಾರ್ಯಕ್ರಮ, ಯೋಜನೆಗಗಳನ್ನು ಯಶಸ್ವಿಯಾಗಿ ಬೂತ್ ಮಟ್ಟದಿಂದ ಅನುಷ್ಠಾನಕ್ಕೆ ತರಲಿದ್ದೇವೆ. ಎಲ್ಲಾ ತಂಡ ರಚನೆಯಾದ ಬಳಿಕ ನಮ್ಮೆಲ್ಲರ ಗುರಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಎಂದ ಅವರು ಎಲ್ಲರೂ ಸಂಕಲ್ಪ ಇಟ್ಟುಕೊಂಡು ಕೆಲಸವನ್ನು ಮುಂದಿನ ಎರಡು ಮೂರು ತಿಂಗಳು ಚುನಾವಣೆ ದೃಷ್ಟಿಯಿಂದ ಕೆಲಸ ಮಾಡಲಿದ್ದೇವೆ ಎಂದರು.
ಇಂದು ಸುಬ್ರಹ್ಮಣ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಹೋಗುವ ವೇಳೆ ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಸಹಜವಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದೇನೆ ಎಂದರು.
ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು ಪಾಲ್ಗೊಂಡರು. ಕ್ಯಾ. ಬ್ರಿಜೇಶ್ ಚೌಟ ಅವರನ್ನು ಪಕ್ಷದ ವತಿಯಿಂದ ಗೌರವಿಸಲಾಯಿತು.