Mangalore: ಮಂಗಳೂರು ವಿ.ವಿ. ತನ್ನ ಶ್ರೇಷ್ಠ ಘನತೆಯನ್ನು ಕಳೆದುಕೊಂಡಿದೆ

Mangalore: ಮಂಗಳೂರು ವಿ.ವಿ. ತನ್ನ ಶ್ರೇಷ್ಠ ಘನತೆಯನ್ನು ಕಳೆದುಕೊಂಡಿದೆ


ಮಂಗಳೂರು: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೊಚಿಮಲ್) ನೇಮಕಾತಿ ಪ್ರಕ್ರಿಯೆಯಲ್ಲಿ ಹುದ್ದೆಗೆ 20 ರಿಂದ 30ಲಕ್ಷದವರೆಗೂ ಅವ್ಯವಹಾರ ನಡೆದಿದ್ದು ನೂರಾರು ಕೋಟಿ ರೂ.ಗಳ ಹಗರಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವೂ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ವಿ.ವಿ.ಯು ತನ್ನ ಶ್ರೇಷ್ಠ ಘನತೆಯನ್ನು ಕಳೆದುಕೊಂಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಕೊಚಿಮುಲ್ ಅಕ್ರಮ ನೇಮಕಾತಿಗೆ ಸಂಬಂಧಿಸಿ ಪರೀಕ್ಷೆ ಹಾಗೂ ಮೌಲ್ಯಮಾಪನವನ್ನು ನಡೆಸಿದ್ದ ಮಂಗಳೂರು ವಿಶ್ವವಿದ್ಯಾಲಯ ಈ ಅಕ್ರಮದಲ್ಲಿ ಭಾಗಿಯಾದ ಖಚಿತ ಮಾಹಿತಿ ಮೇರೆಗೆ ವಿ.ವಿ.ಯ ಕುಲಪತಿ, ಪರೀಕ್ಷಾಂಗ ಹಾಗೂ ಆಡಳಿತ ಕುಲಸಚಿವರ ಕಚೇರಿಗೆ ಇ.ಡಿ. ದಾಳಿ ನಡೆಸಿ, ನೇಮಕಾತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಕೆಲ ವರ್ಷಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಬಗ್ಗೆ ರಾಜ್ಯ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಅತ್ಯುತ್ತಮ ಅಭಿಪ್ರಾಯವಿದ್ದು, ವಿದೇಶಗಳಿಂದಲೂ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಆನಂತರದ ದಿನಗಳಲ್ಲಿ ಇಲ್ಲಿನ ಆಯಕಟ್ಟಿನ ಹುದ್ದೆಗೇರಿದ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ವಿಶ್ವವಿದ್ಯಾಲಯದ ಘನತೆಗೆ ಮಸಿ ಬಳಿದಿದ್ದಾರೆ. ಹೀಗಾಗಿ ವಿ.ವಿ. ತನ್ನ 'ಎ ಗ್ರೇಡ್' ಮಾನ್ಯತೆಯಿಂದ 'ಬಿ ಗ್ರೇಡ್' ಮಾನ್ಯತೆಗೆ ಇಳಿದಿದ್ದು ಇಂತಹ ಅಕ್ರಮಗಳಿಂದ ವಿ.ವಿ.ಯ ಘನತೆಗೆ ಇನ್ನಷ್ಟು ಕುತ್ತುಂಟಾಗುತ್ತಿದೆ. ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರೂ ಈ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯಾಗಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕೆಂದು ಶಾಸಕರು ಒತ್ತಾಯಿಸಿದರು.

ಹಲವು ಸಮಯಗಳಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳ ಫಲಿತಾಂಶವನ್ನು ನೀಡದ್ದು, ಫಲಿತಾಂಶ ಅದಲು ಬದಲಾಗಿದ್ದು, ವರ್ಷಗಟ್ಟಲೆ ಅಂಕಪಟ್ಟಿಯನ್ನು ವಿತರಿಸದೇ ಪ್ರತಿನಿತ್ಯ ವಿದ್ಯಾರ್ಥಿಗಳು ವಿ.ವಿ.ಗೆ ಅಲೆಯುತ್ತಿರುವುದು, ವಿ.ವಿ.ಯ ತಾತ್ಕಾಲಿಕ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡದೇ ಇರುವುದು ಸೇರಿದಂತೆ ಹಲವಾರು ಪ್ರಕರಣಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ವಿ.ವಿ. ವಿರುದ್ಧ ಸಹಜವಾಗಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂತಹ ವಿದ್ಯಾರ್ಥಿ ಸಂಘಟನೆಗಳು ನ್ಯಾಯಕ್ಕಾಗಿ ಬೀದಿಗಿಳಿದಿವೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article