Mangalore: ದಲಿತೋದ್ಧಾರಕ್ಕಾಗಿ ತನ್ನ ಬದುಕನ್ನೇ ಸಮರ್ಪಣೆ ಮಾಡಿದವರು ಕುದ್ಮಲ್ ರಂಗರಾಯರು: ವೇದವ್ಯಾಸ ಕಾಮತ್

Mangalore: ದಲಿತೋದ್ಧಾರಕ್ಕಾಗಿ ತನ್ನ ಬದುಕನ್ನೇ ಸಮರ್ಪಣೆ ಮಾಡಿದವರು ಕುದ್ಮಲ್ ರಂಗರಾಯರು: ವೇದವ್ಯಾಸ ಕಾಮತ್


ಮಂಗಳೂರು: ಈ ದೇಶದಲ್ಲಿ ದಲಿತೋದ್ಧಾರಕ್ಕಾಗಿ ಶ್ರಮಿಸಿದ ಹಲವಾರು ಮಹನೀಯರನ್ನು ಕಾಣಬಹುದು. ಆದರೆ ದಲಿತೋದ್ಧಾರಕ್ಕಾಗಿ ತನ್ನ ಬದುಕನ್ನೇ ಸಮರ್ಪಣೆ ಮಾಡಿದವರು ಎಂದರೆ ನಮ್ಮ ಕುದ್ಮಲ್ ರಂಗರಾಯರು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಅವರು ಜೂ.29 ರಂದು ಕುದ್ಮುಲ್ ರಂಗರಾವ್ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ ಅತ್ತಾವರ ಬಾಬುಗುಡ್ಡ, ಬಿಜೆಪಿ ಎಸ್ಸಿ ಮೋರ್ಚಾ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಕುದ್ಮುಲ್ ರಂಗರಾವ್ ಅವರ ೧೬೫ನೇ ಜನ್ಮದಿನಾಚರಣೆಯ ಪ್ರಯುಕ್ತ ಬಾಬುಗುಡ್ದದಲ್ಲಿರುವ ಸಮಾಧಿಗೆ ಪುಷ್ಪಾರ್ಚನೆ ಹಾಗೂ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದಲಿತರು ಸ್ವಾವಲಂಬಿಯಾಗಿ ಬದುಕಬೇಕು, ಆತ್ಮ ಗಾಂಭೀರ್ಯ ಬೆಳೆಸಿಕೊಳ್ಳಬೇಕೆಂಬುದು ಪೂಜ್ಯರ ಆಶಯವಾಗಿತ್ತು. ಬಡವರ ದೀನದಲಿತರ ವ್ಯಾಜ್ಯಗಳಿಗೆ ಉಚಿತವಾಗಿ ನ್ಯಾಯ ಒದಗಿಸಿ ಬಡವರ ವಕೀಲರೆಂದೇ ಪ್ರಸಿದ್ಧಿ ಪಡೆದಿದ್ದರು. ಹೀನಾಯವಾಗಿ ಬದುಕುತ್ತಿದ್ದ ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ವಕೀಲ ವೃತ್ತಿಯನ್ನೇ ತೊರೆದು ಬದುಕನ್ನು ಸಮಾಜಕ್ಕೆ ಮುಡಿಪಾಗಿಟ್ಟರು ಎಂದರು.

ಡಿ.ಸಿ.ಎಂ. ಸಂಸ್ಥೆ ಸ್ಥಾಪಿಸಿ ಕಂಕನಾಡಿ, ಮೂಲ್ಕಿ, ಬೋಳೂರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್‌ಕಾಡು ಮುಂತಾದ ಕಡೆಗಳಲ್ಲಿ ದಲಿತರಿಗೆ ಶಾಲೆಗಳನ್ನು ತೆರೆದು ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದರು. ಸಮಾಜದಲ್ಲಿ ರಂಗರಾವ್ ಅವರಿಗೆ ಹೆಜ್ಜೆ ಹೆಜ್ಜೆಗೂ ಅವಮಾನ ಸಂಕಟಗಳು ಎದುರಾದಾಗೆಲ್ಲ ಪತ್ನಿ ರುಕ್ಮಿಣಿಯವರು ಧೈರ್ಯ ತುಂಬುತ್ತಿದ್ದರು. ಆ ಮಹಾ ತಾಯಿಯನ್ನು ಕೂಡ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು.

ನೆಲೆ ಇಲ್ಲದೇ ಬದುಕುತ್ತಿದ್ದ ನೂರಾರು ದಲಿತ ಕುಟುಂಬಗಳಿಗೆ ಕೋರ್ಟ್ ಗುಡ್ಡೆ, ಬಿಜೈ, ಕಾಪಿಕಾಡು, ದಡ್ಡಲ್‌ಕಾಡು, ಬಾಬುಗುಡ್ಡೆ, ಕೋಡಿಕಲ್, ಪಣಂಬೂರು ಮುಂತಾದ ಕಡೆಗಳಲ್ಲಿ ಸ್ವಾವಲಂಬಿಯಾಗಿ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಅವರ ಮಹದಾಸೆಯಂತೆ ದಲಿತ ಬಂಧುಗಳು ಇಂದು ದೇಶದ ದೊಡ್ಡ ದೊಡ್ಡ ಹುದ್ದೆಯಲ್ಲಿರುವುದು ರಂಗರಾಯರ ಕನಸು ನನಸಾದಂತಾಗಿದೆ. ಇಡೀ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಹ ದಲಿತ ಸಮುದಾಯದಿಂದ ಬಂದವರಾಗಿದ್ದು ಪ್ರಸ್ತುತ ಸಮಾಜದ ಬದಲಾವಣೆಗೆ ಸಾಕ್ಷಿ ಎಂದರು.

ಅಂದಿನ ಸರ್ಕಾರ ನೀಡಿದ್ದ ‘ರಾವ್ ಸಾಹೇಬ್’ ಎಂಬ ಬಿರುದನ್ನೇ ತ್ಯಜಿಸಿ ಇವೆಲ್ಲ ಮನುಷ್ಯನಲ್ಲಿ ಅಹಂ ಉಂಟು ಮಾಡುತ್ತವೆ ಎಂದಿದ್ದ ಕುದ್ಮಲ್ ರಂಗರಾಯರನ್ನು ಸ್ವತಃ ಮಹಾತ್ಮಾ ಗಾಂಧಿಯವರೂ ಕೂಡಾ ರಂಗರಾವ್ ಅವರನ್ನು ತನ್ನ ಗುರುಗಳು, ತನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಕರು ಎಂದಿದ್ದರು. ಅಂತಹ ಮಹಾನ್ ವ್ಯಕ್ತಿಯ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ರಂಗರಾಯರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಾದಿರಾಜ್ ಬೆಂಗಳೂರು, ಪ್ರೇಮಾನಂದ ಶೆಟ್ಟಿ, ಟ್ರಸ್ಟಿನ ಅಧ್ಯಕ್ಷ ಬಿ.ಆರ್ ಹೃದಯನಾಥ್, ಮನಪಾ ಸದಸ್ಯರುಗಳಾದ ಭರತ್ ಕುಮಾರ್, ಶೈಲೇಶ್, ಮನೋಜ್ ಕೋಡಿಕಲ್, ಪ್ರಮುಖರಾದ ಮೋಹನ್ ಪೂಜಾರಿ, ನಂದನ್ ಮಲ್ಯ, ಪ್ರಕಾಶ್ ಗರೋಡಿ, ಯತೀಶ್, ಶ್ಯಾಮ ಕರ್ಕೇರ, ವಸಂತ ಬಂಗೇರ, ಅನಿತಾ ದಯಾಕರ್, ಶಶಿಕಾಂತ್, ಶಿವಪ್ಪ ಅನಂತೂರು, ರವಿ ಕಾಪಿಕಾಡ್, ಪ್ರಜ್ವಲ್, ವಿನಯ ನೇತ್ರ, ಶಿವಪ್ರಸಾದ್ ಕೊಕ್ಕಡ, ಗೀತಾ, ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ, ವಂದಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article