ಅ.2 ಮತ್ತು 3 ರಂದು ರಾಷ್ಟ್ರೀಯ ಓಪನ್ ರ್ಯಾಪಿಡ್ ರೇಟೆಡ್ ಚೆಸ್ ಪಂದ್ಯಾಟ
ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ವತಿಯಿಂದ ರಾಷ್ಟ್ರೀಯ ಓಪನ್ ರ್ಯಾಪಿಡ್ ರೇಟೆಡ್ ಚೆಸ್ ಪಂದ್ಯಾಟ ಅಕ್ಟೋಬರ್ 2 ಮತ್ತು 3ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ರಮೇಶ್ ಕೋಟೆ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಭತ್ತು ರೌಂಡ್ಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಸುಮಾರು 400 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಆನ್ಲೈನ್ ಮೂಲಕ ನೋಂದಣಿ ಆರಂಭವಾಗಿದೆ. ಇದುವರೆಗೆ 125 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಅ.2ರಂದು ಬೆಳಗ್ಗೆ 9 ಗಂಟೆಗೆ ಎಂಆರ್ಪಿಎಲ್ ಆಡಳಿತ ಮಂಡಳಿ ನಿರ್ದೇಶಕ ಸುದರ್ಶನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಎಸ್ಸಿಎ ಜನರಲ್ ಸೆಕ್ರೆಟರಿ ಅರವಿಂದ ಶಾಸ್ತ್ರಿ, ಶ್ರೀಶಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಸ್. ಗುರುರಾಜ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಚೆಸ್ ಪಂದ್ಯಾವಳಿಯಲ್ಲಿ ಮಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಉತ್ತಮ ಆಟಗಾರರನ್ನು ಪರಿಚಯಿಸುತ್ತಿದೆ. ಅ.3ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಎಂಆರ್ಪಿಎಲ್ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಭಾಗವಹಿಸಲಿದ್ದಾರೆ. ಟೂರ್ನಿಯಲ್ಲಿ 2.4 ಲಕ್ಷ ರೂ. ನಗದು ಬಹುಮಾನ, ಅಲ್ಲದೆ ವಿವಿಧ ವಿಭಾಗಗಳ ಟ್ರೋಫಿ ಜತೆಗೆ ಸುಮಾರು ನೂರೈವತ್ತಕ್ಕೂ ಮಿಕ್ಕಿ ಬಹುಮಾನಗಳು ಇರಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್, ಉಪಾಧ್ಯಕ್ಷೆ ವಾಣಿ ಎಸ್. ಪಣಿಕ್ಕರ್, ಕೋಶಾಧಿಕಾರಿಪೂರ್ಣಿಮಾ ಎಸ್. ಆಳ್ವ, ಜತೆ ಕಾರ್ಯದರ್ಶಿ ಸತ್ಯಪ್ರಸಾದ್ ಉಪಸ್ಥಿತರಿದ್ದರು.