ಅತಿಥಿ ಉಪನ್ಯಾಸಕರ ನೇಮಕಾತಿ ಬಿಕ್ಕಟ್ಟು ಬಗೆಹರಿಸಿ: ವಿನಯಚಂದ್ರ
ಮಂಗಳೂರು: ರಾಜ್ಯದಾದ್ಯಂತ ಈಗಾಗಲೇ ಪದವಿ ಕಾಲೇಜುಗಳು ಆರಂಭವಾಗಿ ಒಂದು ತಿಂಗಳೇ ಕಳೆದರೂ, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದರ ಪರಿಣಾಮವಾಗಿ ಪದವಿ ಕಾಲೇಜುಗಳಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯದೇ, ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿಯು ಅತಂತ್ರ ಪರಿಸ್ಥಿತಿಗೆ ತಲುಪಿದೆ.
ಮಂಗಳೂರಿನಲ್ಲಿರುವ ಸರ್ಕಾರಿ ಹಾಗೂ ವಿವಿಯ ಪದವಿ ಕಾಲೇಜುಗಳು ಈಗಾಗಲೇ ಆರಂಭವಾಗಿ ಒಂದು ತಿಂಗಳಾದರೂ ಸಹ ಅತಿಥಿ ಉಪನ್ಯಾಸಕರ ನೇಮಕಾತಿಯಾಗಿರದ ಕಾರಣ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಶೇ.60-80ರಷ್ಟು ಪಠ್ಯಕ್ರಮ ನಿರ್ವಹಿಸುವ ಜವಾಬ್ದಾರಿಯನ್ನು ಅತಿಥಿ ಉಪನ್ಯಾಸಕರೇ ಹೊತ್ತಿರುತ್ತಾರೆ. ಈಗಲೂ ಸಹ ಅದೇ ಮುಂದುವರೆಯುತ್ತಿದೆ. ಉಪನ್ಯಾಸಕರ ನೇಮಕಾತಿಯ ವಿಷಯವು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ಈ ಬಿಕ್ಕಟ್ಟು ಪರಿಹಾರವಾಗುವುದಾದರೂ ಎಂದು ಎಂಬುದರ ಕುರಿತು ಈಗಲೂ ಸ್ಪಷ್ಟತೆ ಇಲ್ಲ. ಹೀಗೆಯೇ ಮುಂದುವರೆದಲ್ಲಿ ಈ ವರ್ಷವೂ ಸಹ ವಾರ್ಷಿಕ ವೇಳಾಪಟ್ಟಿಯು ಅತಂತ್ರ ಸ್ಥಿತಿಗೆ ತಲುಪುತ್ತದೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಈ ಕೂಡಲೇ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಎಐಡಿಎಸ್ಓ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ಜಿಲ್ಲಾ ಸಂಚಾಲಕ ವಿನಯಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.