ಸಿಬಿಐ ಸ್ವಯಂ ಪ್ರೇರಿತ ತನಿಖೆಗೆ ನಿರ್ಬಂಧ: ಬಿಜೆಪಿ ವಿರೋಧ
ಮಂಗಳೂರು: ಕೇಂದ್ರ ತನಿಖಾ ದಳವು (ಸಿಬಿಐ) ಸ್ವಯಂ ಪ್ರೇರಿತ ತನಿಖೆ ನಡೆಸಬಹುದೆಂಬ ಅಧಿಕಾರವನ್ನು ರದ್ದು ಮಾಡುವ ಸಂಪುಟದ ನಿರ್ಣಯ ಸಂವಿಧಾನ ವಿರೋಧಿಯಾಗಿದೆ. ಸಿದ್ಧರಾಮಯ್ಯ ಅವರು ತನಿಖೆಯ ಭಯದಿಂದ ಈ ನಿರ್ಧಾರ ಮಾಡಿದಂತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆರೋಪಿಸಿದೆ.
ನಗರದ ದ.ಕ. ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ರಾಜ್ಗೋಪಾಲ್ ರೈ ಮಾತನಾಡಿ, ಸಿಬಿಐ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರವು ಸಂವಿಧಾನ ವಿರೋಧಿ ನಿರ್ಧಾರ ತೆಗೆದುಕೊಂಡಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಸಿದ್ಧರಾಮಯ್ಯ ಸರಕಾರ ಹಗರಣಗಳ ಸರಕಾರವಾಗಿದ್ದು, ಮುಂದೆ ಇದಕ್ಕೆ ತಕ್ಕುದಾದ ಬೆಲೆ ತೆರಳಬೇಕಾಗಿದೆ. ಇನ್ನೊಂದೆಡೆ ರಾಜ್ಯಪಾಲರು ಸರಕಾರಕ್ಕೆ ಬರೆದ ಪತ್ರಕ್ಕೆ ಸಚಿವ ಸಂಪುಟದ ಗಮನಕ್ಕೆ ಬಾರದೆ ಮುಖ್ಯ ಕಾರ್ಯದರ್ಶಿಗಳು ಉತ್ತರಿಸುವಂತಿಲ್ಲ ಎಂದು ನಿರ್ಬಂಧ ಹೇರಿರುವುದು ಸರಿಯಲ್ಲ. ಇದು ರಾಜಭವನ ಮತ್ತು ಸರಕಾರದ ಮಧ್ಯೆ ಸಂಘರ್ಷಕ್ಕೆ ಎದೆ ಮಾಡಿಕೊಡುವಂತಿದೆ. ಇವನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಅರೋಪ ಬಂದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ದು, ಈಗ ಅವರಿಗೆ ತಮ್ಮ ನಿಲುವು ಅನ್ವಯಿಸಲ್ವೇ? ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರರಾದ ಅರುಣ್ ಜಿ. ಶೇಟ್, ಮೋಹನ್ರಾಜ್ ಕೆ.ಆರ್. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್, ಡೊಂಬಯ್ಯ ಅರಳ ಉಪಸ್ಥಿತರಿದ್ದರು.