ಅತಿಥಿ ಶಿಕ್ಷಕರಿಗೆ ಕೂಲಿ ಕಾರ್ಮಿಕರಿಗಿಂತ ಕಡಿಮೆ ಸಂಬಳ: ದಯಾಮಣಿ

ಅತಿಥಿ ಶಿಕ್ಷಕರಿಗೆ ಕೂಲಿ ಕಾರ್ಮಿಕರಿಗಿಂತ ಕಡಿಮೆ ಸಂಬಳ: ದಯಾಮಣಿ

ಮಂಗಳೂರು: 2012ನೇ ಸಾಲಿನಿಂದ ಪ್ರತಿವರ್ಷ ಅತಿಥಿ ಶಿಕ್ಷಕರನ್ನು ಸರಕಾರ ನೇಮಕಾತಿ ಮಾಡಿಕೊಂಡು ಬರುತ್ತಿದೆ. ಆದರೆ ಓರ್ವ ಕೂಲಿ ಕಾರ್ಮಿಕನಿಗಿಂತ ಕಡಿಮೆ ಸಂಬಳ ಅಂದ್ರೆ ದಿನಕ್ಕೆ 333 ರೂ.ನಂತೆ ವೇತನ ನೀಡುತ್ತಿದೆ. ಅದು ಕೂಡ ಪ್ರತಿ ವರ್ಷ ಪ್ರತಿಭಟನೆ ಮಾಡಿ ಎಚ್ಚರಿಸಿದರೆ ಮಾತ್ರ 5 ತಿಂಗಳಿಗೊಮ್ಮೆ ತುಂಬಾ ಕಷ್ಟದಲ್ಲಿ ಸಂಬಳವನ್ನು ನೀಡುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. 

ಜೀವನ ಮಾಡುವುದು ಹೇಗೆ ಅನ್ನೋದು ಯೋಚನೆ ಮಾಡುವ ಸ್ಥಿತಿ ಬಂದಿದೆ. ಸಮಾಜದ ಅತ್ಯುನ್ನತ ಗೌರವಯುತ ಸ್ಥಾನದಲ್ಲಿ ಗುರುವನ್ನು ಕಾಣುವ ಸಮಾಜದಲ್ಲಿ ಭವಿಷ್ಯತ್ತನ್ನು ಕಳೆದುಕೊಂಡು ಬೀದಿಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ಸರಕಾರ ತಂದಿಟ್ಟಿದೆ. ರಾಜ್ಯದಲ್ಲಿ ಪ್ರತಿವರ್ಷ ಅತಿಥಿ ಶಿಕ್ಷಕರನ್ನು ಹೆಚ್ಚು ಹೆಚ್ಚು ನೇಮಕಾತಿ ಮಾಡುತ್ತ ಬರುತ್ತಿದೆ. ಜೂನ್‌ನಲ್ಲಿ ನೇಮಕಾತಿ ಮಾಡಿ ವರ್ಗಾವಣೆ ಹಾಗೂ ಹೊಸ ನೇಮಕಾತಿ ಆದೇಶವಾಗಿ ಖಾಯಂ ಶಿಕ್ಷಕರು ಬಂದಾಗ ಯಾವುದೇ ಮಾನವೀಯತೆ ನೋಡದೆ ಅತಿಥಿ ಶಿಕ್ಷಕರ ಹುದ್ದೆಯಿಂದ ಕೈ ಬಿಟ್ಟು ಮುಂದೆ ಜೀವನ ಹೇಗೆ ಅನ್ನೋ ದುಃಖದ ಸ್ಥಿತಿಗೆ ಸರಕಾರ ತಂದೊಡ್ಡುತ್ತೆ.

ಪ್ರತಿ ಇಲಾಖೆಯಲ್ಲಿ ಇರುವಂತೆ 10 ವರ್ಷ ಸೇವೆ ಸಲ್ಲಿಸಿರುವ ನೌಕರರನ್ನು ಖಾಯಂ ಮಾಡುವ ಕಾನೂನು ಇರುವಂತೆ ಶಿಕ್ಷಣ ಇಲಾಖೆಯಲ್ಲಿ ಈ ಕಾನೂನು ಮಾಡುವಂತೆ ಸರಕಾರಕ್ಕೆ ಸತತವಾಗಿ 2 ವರುಷದಿಂದ ಮನವಿ ಮಾಡಿಕೊಂಡು ಬಂದಿದ್ರೂ ಕೂಡ ಸರಕಾರ ಇದು ಯಾವುದನ್ನು ಕೇರ್ ಮಾಡದೇ ನಮ್ಮನ್ನು ಗುಲಾಮರು, ಜೀತದಾಳುಗಳ ರೀತಿ ಯಾವುದೆ ಸೇವಾ ಭದ್ರತೆ, ಯಾವುದೇ ಸಂಬಳ ಹೆಚ್ಚು ಮಾಡದೇ ಕೊಡುವ ಸಂಬಳವನ್ನು ಸರಿ ನೀಡದೆ ಸತಾಯಿಸುತ್ತಿದೆ. 

ಗುರುವನ್ನು ದೇವರ ಸ್ವರೂಪ ಅನ್ನೋ ರೀತಿ ನೋಡುವ ಈ ಸಮಾಜದಲ್ಲಿ ಗುರುವಿಗೆ ಭವಿಷ್ಯತ್ ಇಲ್ಲಾ ಅಂದ್ರೆ ಈ ಬದುಕೋದು ಹೇಗೆ ಅನ್ನೋದೇ ನಮ್ಮ ಪ್ರಶ್ನೆಯಾಗಿದೆ. ಸರಕಾರಿ ಶಾಲೆಯ ಪ್ರತೀ ಒಬ್ಬ ಮಗುವಿನ ಭವಿಷ್ಯತ್ ರೂಪಿಸುವುದಕ್ಕಾಗಿ ನಾವುಗಳು ದಿನದ ಎಲ್ಲಾ ಅವಧಿಗಳಲ್ಲಿ ಕೊಡುವ ಸಂಬಳ ಕಡಿಮೆ ಇದ್ದರೂ ಕೂಡ ಪಾಠ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸರಕಾರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ನಮ್ಮನ್ನು ಸರಕಾರ ಕೇವಲ ‘ಅತಿಥಿಗಳು’ ಅನ್ನೋ ತಾರತಮ್ಯ ಮಾಡುವುದನ್ನು ಬಿಟ್ಟು, ಯಾವುದೇ ಪಕ್ಷದ ಯಾವುದೇ ಜನ ಪ್ರತಿನಿಧಿಗಳು ಯಾವ ಸರಕಾರಗಳು, ಯಾರೇ ಅಧಿಕಾರಿ ವರ್ಗದವರು ಕೂಡ ನಮ್ಮನ್ನು ಜೀತದಾಳುಗಳು ಅನ್ನೋದನ್ನು ಭಾವಿಸದೆ ನಿಮ್ಮ ಕುಟುಂಬದ ಸದಸ್ಯರ ರೀತಿ ನಾವುಗಳು ನಿಮ್ಮ ಮನೆಯ ಮಕ್ಕಳಿಗೆ ಜ್ಞಾನಾರ್ಜನೆ ಮಾಡಿರುವ ಗುರುಸ್ಥಾನದಲ್ಲಿ ಇರುವವರು ನಮಗೂ ಕುಟುಂಬ ಇದೆ. ಜೀವನ ಇದೆ ಅನ್ನೋದನ್ನು ಅರ್ಥ ಮಾಡಿಕೊಂಡು ಆದಷ್ಟು ಬೇಗ ಸಂಬಳ ಹೆಚ್ಚು ಮಾಡುವುದರೊಂದಿಗೆ ಸಂಬಳವನ್ನು ಆದಷ್ಟು ಬೇಗ ಪಾವತಿ ಮಾಡುವಂತೆ ಈ ಕೂಡಲೇ ಸರಕಾರಕ್ಕೆ ಆಗ್ರಹಿಸಬೇಕಾಗಿ ದ.ಕ. ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಪ್ರ.ಕಾರ್ಯದರ್ಶಿ ದಯಾಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article