ಪಕ್ಷಕ್ಕಾಗಿ ಪ್ರಾಣ ತ್ಯಾಗ ಮಾಡಿದ ದಿ. ಜಗದೀಶ್ ಪೂಜಾರಿ ಕುಟುಂಬಕ್ಕೆ ಶಾಸಕ ಡಾ. ಭರತ್ ಶೆಟ್ಟಿ ವೈ. ನೆರವಿನಿಂದ ಮನೆ ಭಾಗ್ಯ
ಅರ್ಕುಳ: ಪಕ್ಷಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಬಿಜೆಪಿ ಕಾರ್ಯಕರ್ತ ದಿ. ಜಗದೀಶ್ ಪೂಜಾರಿ ಕುಟುಂಬಕ್ಕೆ ಆಸರೆಯಾದ ಶಾಸಕ ಡಾ. ಭರತ್ ಶೆಟ್ಟಿ ವೈ ಹಾಗೂ ಉತ್ತರ ಮಂಡಲ ಬಿಜೆಪಿ ಯುವ ಮೋರ್ಚ ತಂಡವು ಮನೆಯೊಂದನ್ನು ನಿರ್ಮಿಸಿ ಕೊಟ್ಟಿದೆ. ಈ ಮೂಲಕ ದಿ. ಜಗದೀಶ್ ಪೂಜಾರಿ ತನ್ನ ತ೦ದೆ ತಾಯಿಗೆ ಮನೆಯೊಂದನ್ನು ನಿರ್ಮಿಸಿಕೊಡಬೇಕೆಂಬ ಕನಸನ್ನು ಈಡೇರಿಸಿ ಧನ್ಯರಾಗಿದ್ದಾರೆ.
ಭಾನುವಾರ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನ ಪೋಷಕರ ಕಣ್ಣಲ್ಲಿ ನೀರು ತುಂಬಿ ಒಂದು ಕಣ್ಣೀರ ಹನಿಯ ಮೂಲಕ ಕೃತಜ್ಞತೆಯ ಭಾವ ಹೊರಬ೦ದಿತು. 2004ರಲ್ಲಿ ಚುನಾವಣೆಯ ಸಂದರ್ಭ ಅರ್ಕುಳದ ವಳಚ್ಚಿಲ್ ಗ್ರಾಮದ ಬಿಜೆಪಿ ಕಾರ್ಯಕರ್ತ ಜಗದೀಶ್ ಪೂಜಾರಿ ಬೂತೊ೦ದರಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಬುರ್ಕಾಧರಿಸಿ ಒರ್ವ ವ್ಯಕ್ತಿ ನಕಲಿ ಮತದಾನ ಮಾಡಲು ಬಂದ ಮೇರೆಗೆ ಆ ಬಗ್ಗೆ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದರು ಇದನ್ನೇ ನೆಪವಾಗಿರಿಸಿ ದುಷ್ಕರ್ಮಿಗಳು ಈತ ತನ್ನ ಮನೆಗೆ ಬರುತ್ತಿದ್ದಾಗ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು.
ಕಡು ಬಡತನದಲ್ಲಿಯೂ ತನ್ನ ಪಾಳು ಬಿದ್ದ ಮನೆ ಜತೆ ಕುಟುಂಬವನ್ನು ನೋಡಿಕೊಳ್ಳಲು ಸಣ್ಣ ಉದ್ಯೋಗದ ಆಸರೆ ಹೊಂದಿದ್ದ ಇವರು, ಈ ನಡುವೆ ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಯಾವುದೇ ಅಂಜಿಕೆ ಇಲ್ಲದೆ ಹೋರಾಟವನ್ನು ನಡೆಸುತ್ತಾ ಹುತಾತ್ಮರಾದ ಜಗದೀಶ್ ಪೂಜಾರಿಯ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ಶಾಸಕ ಡಾ. ಭರತ್ ಶೆಟ್ಟಿ ವೈ, ಮಂಗಳೂರು ಉತ್ತರ ಮಂಡಲದ ಬಿಜೆಪಿ ಯುವ ಮೋರ್ಚ ತಂಡ ತೆಗೆದುಕೊಂಡಿಲ್ಲದೆ 12 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿದೆ. ಹಾಲ್, ಎರಡು ಕೊಠಡಿ, ಅಡುಗೆ ಮನೆ, ಶೌಚಾಲಯ ಸಹಿತ ಉತ್ತಮ ವ್ಯವಸ್ಥೆ ಹೊಂದಿದ ಮನೆ ನಿರ್ಮಿಸಲಾಗಿದೆ.
ಹೊಸ ಮನೆಯ ಉದ್ಘಾಟನೆಯನ್ನು ಸಂಸದ ಬ್ರಿಜೇಶ್ ಚೌಟ ಅವರು ಮನೆ ಫಲಕ ಅನಾವರಣಗೊಳಿಸಿ ಶಾಸಕರು ಹಾಗೂ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರಲ್ಲದೆ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಿದ್ದೇ ಇಂತಹ ಒಗ್ಗಟ್ಟಿನ ಕಾರ್ಯಕ್ರಮಗಳು ಆಗಿದೆ. ಪಕ್ಷದ ಜಿಲ್ಲಾ ಘಟಕವು ಸದಾ ಕಾರ್ಯಕರ್ತರ ಜತೆ ನಿಲ್ಲುತ್ತದೆ, ಅವರ ಕಷ್ಟಗಳಿಗೆ ಸ್ಪಂದಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಶಾಸಕ ಡಾ. ಭರತ್ ಶೆಟ್ಟಿ ವೈ ಮಾತನಾಡಿ, ಪಕ್ಷದ ಕಾರ್ಯಕರ್ತ ಜಗದೀಶ್ ಪೂಜಾರಿ ಅವರು ಹಿಂದುತ್ವಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಇಂದು ಮನೆ ನಿರ್ಮಿಸಿಕೊಟ್ಟಿರುವುದು ನಮ್ಮೆಲ್ಲರಲ್ಲಿ ಧನ್ಯತಾ ಭಾವ ಮೂಡಿಸಿದೆ. ಇದೊಂದು ನನ್ನ ಜೀವನದಲ್ಲಿ ಭಾವನಾತ್ಮಕ ಕ್ಷಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣಕ್ಕೆ ಸಹಕರಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ, ಭರತ್ ರಾಜ್ ಕೃಷ್ಣಾಪುರ, ಶ್ವೇತ ಪೂಜಾರಿ ಹಾಗೂ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಭರತ್ ರಾಜ್ ಕೃಷ್ಣಾಪುರ, ಪ್ರದೀಪ್ ಶೆಟ್ಟಿ ಅಡ್ಯಾರ್, ಪ್ರವೀಣ್ ಶೆಟ್ಟಿ, ಸದಾನಂದ ಆಳ್ವ, ನಾರಾಯಣ ಪೂಜಾರಿ, ಕಮಲಾಕ್ಷ ತಲಿಮಾರ್, ಆಶಿತ್ ನೊಂಡ, ರಕ್ಷಿತ್ ಪೂಜಾರಿ, ಸಂದೀಪ್ ಶೆಟ್ಟಿ ರಣ್ದೀಪ್ ಕಾಂಚನ್, ಸ೦ದೀಪ ಪಚ್ಚನಾಡಿ, ಮನೆಯವರಾದ ನಾರಾಯಣ ಪೂಜಾರಿ, ಚಂದ್ರಾವತಿ, ಸಹೋದರರಾದ ವಿನೋದ್, ದಿನೇಶ್, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದರು.



