ಅಕ್ರಮ ಮದ್ಯ ಸಾಗಾಟ: ಓರ್ವನ ಬಂಧನ
Sunday, October 6, 2024
ಕುಂದಾಪುರ: ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಪಟ್ಟೆಹಚ್ಚಿದ ಕುಂದಾಪುರ ವಲಯ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ, ವಾಹನವನ್ನು ಮದ್ಯ ಸಹಿತ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಶನಿವಾರ ಕುಂದಾಪುರ ಹೊರ ವಲಯದ ತಲ್ಲೂರು ಜಂಕ್ಷನ್ನಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಏಸ್ ವಾಹನದ ಫ್ಲಾಟ್ ಫಾರ್ಮ್ ಕೆಳಗಡೆ ವಿಶೇಷ ಕಂಪಾರ್ಟ್ಮೆಂಟ್ ರಚಿಸಿಕೊಂಡು ಅದರಲ್ಲಿ ಅಕ್ರಮವಾಗಿ 20.250 ಲೀಟರ್ ಗೋವಾ ಮಧ್ಯವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. 3.26 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಆಪಾದಿತನಾದ ಕುಂದಾಪುರ ಆನಗಳ್ಳಿಯ ನೆಲ್ಸನ್ ಡಿಸೋಜ ಬಿನ್ ಬೆಂಜಮಿನ್ ಡಿಸೋಜ, ಕಂಪನತಪ್ಪಲು ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.
ಅಬಕಾರಿ ಇಲಾಖಾ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ನಡೆಸಲಾದ ಈ ಪತ್ತೆ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯದ ಅಬಕಾರಿ ಸಿಬ್ಬಂದಿಯವರಾದ ರವಿಚಂದ್ರ ನಾಯ್ಕ ಅಬಕಾರಿ ಕಾನ್ಸ್ಟೇಬಲ್, ಶಂಕ್ರಪ್ಪ ಅಬಕಾರಿ ಹೆಡ್ ಕಾನ್ಸ್ಟೇಬಲ್ ಮತ್ತು ವಾಹನ ಚಾಲಕ ಚಂದ್ರಶೇಖರ್ ಭಾಗವಹಿಸಿರುತ್ತಾರೆ.